ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ನಾನು ಬೈ ಚಾನ್ಸ್ ಆಗಿ ತೆಗೆದುಕೊಂಡಿದ್ದೇನೆ ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯದ ವಿಭಾಗದಿಂದ ನಡೆದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಸಚಿವರು ಭಾಗವಹಿಸಿ ಮಾತನಾಡಿದರು. ನನಗೆ ಇಂಧನ ಖಾತೆ ಬೇಕು ಎಂದು ಕೇಳಿದ್ದೆ. ಆದರೆ ನಾನು ಅದೇಗೆ ವೈದ್ಯಕೀಯ ಶಿಕ್ಷಣ ಸಚಿವ ಆದೆನೋ ಗೊತ್ತಿಲ್ಲ. ಒಂದೇ ನಿಮಿಷದ ಅವಧಿಯಲ್ಲಿ ಎಲ್ಲಾ ನಿರ್ಧಾರ ಆಯ್ತು ಎಂದು ತಮಗೆ ಸಿಕ್ಕಿದ ನೂತನ ಖಾತೆಯ ರಹಸ್ಯ ಬಿಚ್ಚಿಟ್ರು.
ಸನ್ಮಾನ ಬೇಡ ಎಂದ್ರು ಡಿಕೆಶಿ: ಸಿಎಂ ಕುಮಾರಸ್ವಾಮಿ ಅವರು ಸನ್ಮಾನ ತಿರಸ್ಕರಿಸಿದ್ದ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ಸಹ ಇಂದು ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ತಿರಸ್ಕರಿಸಿದರು. ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಕಾರ್ಯಕ್ರಮದ ಆಯೋಜಕರು ಸನ್ಮಾನ ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ ಈಗ ಸನ್ಮಾನ ಬೇಡ ಎಂದ ಸಚಿವರು ಸಿಎಂ ಕುಮಾರಸ್ವಾಮಿಯನ್ನು ಅನುಸರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ಶಿವನಾಂದ್ ಪಾಟೀಲ್, ಆರೋಗ್ಯ ಇಲಾಖೆ ಇಂದು ಗೊಂದಲದ ಗೂಡಾಗಿದೆ. ಅದನ್ನು ಸರಿ ಪಡಿಸುವ ಕೆಲಸ ಸರ್ಕಾರದ ಮೇಲೆ ಇದೆ. ಈ ಕಾರ್ಯವನ್ನು ಮಾಡಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಜೊತೆಗೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿಯೇ ಯಶಸ್ವಿನಿ ಯೋಜನೆಯ ಉತ್ತಮ ಯೋಜನೆಯನ್ನು ಅಳವಡಿಸಿಕೊಳ್ಳುತ್ತೇವೆ. ಇನ್ನು ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವುದರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.