ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ (Valmiki Corporation Scam) ಹಣ ವರ್ಗಾವಣೆಯಲ್ಲಿ ಸಾಸಿವೆ ಕಾಳಿನಷ್ಟೂ ನನ್ನ ಪಾತ್ರ ಇಲ್ಲ ಎಂದು ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ (Basanagouda Daddal) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಈ ವೇಳೆ ಎಸ್ಐಟಿ ಆಗಲಿ ಸಿಬಿಐ ಆಗಲಿ ಈ ಪ್ರಕರಣದಲ್ಲಿ ನನಗೆ ನೋಟಿಸ್ ನೀಡಿಲ್ಲ. ಯಾವುದೇ ತನಿಖೆಗೂ ಕರೆದಿಲ್ಲ. ಮಾಜಿ ಸಚಿವ ನಾಗೇಂದ್ರ ಅವರ ಪಾತ್ರದ ಬಗ್ಗೆ ಆರೋಪಿಗಳ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ ಅಷ್ಟೇ. ನನ್ನ ರಾಜೀನಾಮೆ ಕೇಳಿದ್ರೆ, ಇಡಿ ಪ್ರಕರಣದಲ್ಲಿ ಸಾಸಿವೆ ಕಾಳಿನಷ್ಟೂ ನನ್ನ ಪಾತ್ರ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಲೂಟಿಗಾಗಿ ಸುರಂಗ ಕೊರೆಯುವ ಕೆಲಸ: ಸರ್ಕಾರದ ವಿರುದ್ಧ ಆರ್.ಅಶೋಕ್ ಆರೋಪ
ಯಾರಾದರೂ ನನ್ನ ಹೆಸರು ಹೇಳಿ ದುರುಪಯೋಗಪಡಿಸಿಕೊಂಡಿದ್ದರೆ ತನಿಖೆಯಲ್ಲಿ ಅದು ಬಹಿರಂಗವಾಗಲಿದೆ. ನಾನು ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ. ರಾಜೀನಾಮೆ ಕೊಡಲು ನನಗೆ ಯಾರು ಹೇಳಿಲ್ಲ. ಸಿಎಂ ಹಾಗೂ ನಾಯಕರು ಹೇಳಿದರೆ ರಾಜೀನಾಮೆ ಕೊಡುತ್ತೇನೆ. ತನಿಖೆಯಿಂದ ಸತ್ಯ ಹೊರಬರಲಿ ಎಂದು ಅವರು ತಿಳಿಸಿದ್ದಾರೆ.
ಜೂನ್ 26 ರಂದು ಎಸಿಎಸ್ ಮಂಜುನಾಥ ಪ್ರಸಾದ್ ನೇತೃತ್ವದಲ್ಲಿ ನಿಗಮಕ್ಕೆ ಕಳೆದ 10 ವರ್ಷಕ್ಕೆ ಬಿಡುಗಡೆ ಆದ ಖರ್ಚಾದ ಹಣಕಾಸಿನ ವಿವರವನ್ನ ಎಸ್ಐಟಿಗೆ ಕೊಡಲು ಮಾಹಿತಿ ಸಂಗ್ರಹಿಸಲಾಗಿದೆ. ಈ ಬಗ್ಗೆ ಬುಕ್ಲೆಟ್ ಸಿದ್ಧವಾಗುತ್ತಿದೆ. ಹಿಂದೆಯೂ ಏನಾದ್ರೂ ಹೀಗೆ ಹಗರಣ ಆಗಿತ್ತಾ ಎಂಬ ಬಗ್ಗೆಯೂ ಪರಿಶೀಲನೆ ಆಗಲಿದೆ. ಎಸ್ಐಟಿ, ಇಡಿ ಎಲ್ಲರೂ ದಾಖಲೆ ಪರಿಶೀಲನೆ ಮಾಡ್ತಿದ್ದಾರೆ.
ನಮ್ಮ ಪಿಎಗೆ ಅಥವಾ ಯಾರಿಗೆ ಹಣ ಕೊಟ್ಟಿದ್ದಾರೆ, ಅವರಿಗೆ ನೋಟಿಸ್ ಕೊಟ್ಟು ತನಿಖೆ ನಡೆಸುತ್ತಾರೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಆಗುತ್ತದೆ. ಈಗ ತನಿಖೆ ನಡೆಯುತ್ತಿರುವುದರಿಂದ ನಿಗಮದಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಚಾರ್ಜ್ಶೀಟ್ ಸಲ್ಲಿಕೆ ಆಗುವವರೆಗೂ ಯಾವುದೇ ಚಟುವಟಿಕೆ ಇರುವುದಿಲ್ಲ. ನಿಗಮದ ಹಣ ಯಾರು ತಿಂದಿದ್ದಾರೆ, ಕಕ್ಕಿಸುವ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಸಿಎಂ ಮನೆಗೆ ಬಿಜೆಪಿಯಿಂದ ಮುತ್ತಿಗೆ ವಿಚಾರವಾಗಿ, ವಿರೋಧ ಪಕ್ಷಗಳು ಅವರ ಕೆಲಸ ಅವರು ಮಾಡುತ್ತಾರೆ. ನಿಷ್ಪಕ್ಷಪಾತ ತನಿಖೆಯಿಂದ ಸತ್ಯ ಹೊರ ಬರಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಣ್ಣು ಕುಸಿತ ಪ್ರಕರಣ- ಮಣ್ಣಿನಡಿ ಸಿಲುಕಿದ ಕಾರ್ಮಿಕ ದುರ್ಮರಣ