ಬೀದರ್: ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಮುಸ್ಲಿಂ ಮತ ಓಲೈಕೆ ಮಾಡಿಕೊಳ್ಳಲು ಹೋಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಬ್ ನಬಿ ಆಜಾದ್ ಬೀದರ್ ಜಿಲ್ಲೆಗೆ ಆಗಮಿಸಿದ್ರು. ಈ ವೇಳೆ ಬೀದರ್ ಉತ್ತರ ಕ್ಷೇತ್ರದ ಕೈ ಅಭ್ಯರ್ಥಿ ರಹೀಂ ಖಾನ್, ಗುಲಾಬ್ ನಬಿ ಆಜಾದ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲೆ ಈ ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ವೋಟ್ ಹೆಚ್ಚು ಇರುವುದರಿಂದ ನನಗೆ ಬೀದರ್ ಉತ್ತರ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಇಲ್ಲದಿದ್ದರೆ ಜೀವನದಲ್ಲೇ ನನಗೆ ಟಿಕೆಟ್ ಸಿಗುತ್ತಿರಲಿಲ್ಲ. ಕೇವಲ ಮುಸ್ಲಿಂ ಮತದಾರರಿಂದ ನನ್ನ ಗೆಲುವು ಸಾಧ್ಯ. ಆದ್ದರಿಂದ ನೀವು ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ನಾನು ಸೋತರೆ ಅದು ಮುಸ್ಲಿಂ ಸಮಾಜಕ್ಕೆ ಮಾಡಿದ ಅವಮಾನ ಎಂದು ಮತ್ತೊಂದು ಹೇಳಿಕೆಯನ್ನು ರಹೀಂ ಖಾನ್ ನೀಡಿದ್ದಾರೆ.
ರಹೀಂ ಖಾನ್ಗೆ ಮುಸ್ಲೀಂ ಮತಗಳು ಮಾತ್ರ ಬೇಕಾ? ಹಾಗಾದ್ರೆ ಬೇರೆ ಸಮಾಜದ ಮತ ಬೇಡವೇ ಎಂದು ಜನ ಈಗ ಪ್ರಶ್ನೆ ಮಾಡುತ್ತಿದ್ದಾರೆ. ಒಬ್ಬ ಶಾಸಕರಾಗಿ ಧರ್ಮವನ್ನು ಮುಂದಿಟ್ಟುಕೊಂಡು ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಜನ ಜನ ಪ್ರಶ್ನೆ ಮಾಡುತ್ತಿದ್ದಾರೆ.