ಮುಂಬೈ: ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಲು ನನಗೆ ಆಹ್ವಾನದ ಅಗತ್ಯವಿಲ್ಲ ಎಂದು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ (Uddhav Thackeray) ಹೇಳಿದ್ದಾರೆ.
ಅಯೋಧ್ಯೆಯ ಆಮಂತ್ರಣ (Ayodhya Invitation) ಪತ್ರಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ಮೊದಲನೆಯದಾಗಿ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಎರಡನೆಯದಾಗಿ ಅಲ್ಲಿಗೆ ಹೋಗಲು ನನಗೆ ಆಹ್ವಾನದ ಅಗತ್ಯವಿಲ್ಲ. ರಾಮ ಯಾವುದೇ ಪಕ್ಷದ ಆಸ್ತಿಯಲ್ಲ, ಅವರು ಎಲ್ಲರಿಗೂ ಸೇರಿದವರು. ಹೀಗಾಗಿ ಇದನ್ನು ರಾಜಕೀಯಗೊಳಿಸಬಾರದು ಎಂದು ನಾನು ಬಯಸುತ್ತೇನೆ. ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ (Supreme Court) ನೀಡಿದೆ, ಸರ್ಕಾರವಲ್ಲ ಎಂದು ಹೇಳಿದರು.
ರಾಮಮಂದಿರ (Ram Mandira) ಲೋಕಾರ್ಪಣೆಗೆ ಅಯೋಧ್ಯೆ ಸಜ್ಜಾಗಿದೆ. ಬರೋಬ್ಬರಿ 500 ವರ್ಷಗಳ ಬಳಿಕ ಸ್ವಸ್ಥಾನಕ್ಕೆ ರಾಮಲಲ್ಲಾ ಮರಳುತ್ತಿದ್ದು, ರಾಷ್ಟ್ರೀಯ ಉತ್ಸವದ ರೀತಿ ಆಚರಿಸಲು ಮೋದಿ (Narendra Modi) ಸರ್ಕಾರ ಉತ್ಸುಕವಾಗಿದೆ. ಈ ಹೊತ್ತಲ್ಲಿ ನಿರೀಕ್ಷೆಯಂತೆ ಬಿಜೆಪಿ (BJP) ವರ್ಸಸ್ ಅನ್ಯರು ಮಧ್ಯೆ ಕ್ರೆಡಿಟ್ ವಾರ್ ಜೋರಾಗಿದೆ. ಇದು ಬಿಜೆಪಿಯ ಕಾರ್ಯಕ್ರಮ ಅಂತ ವಿಪಕ್ಷಗಳ ವಾಗ್ದಾಳಿ ನಡೆಸಿದ್ರೆ, ಶ್ರೀರಾಮ ಬಿಜೆಪಿಯ ಸ್ವತ್ತಲ್ಲ ಅಂತ ಕಾಂಗ್ರೆಸ್ (Congress) ಮಿತ್ರಪಕ್ಷಗಳು ಟೀಕಿಸ್ತಿವೆ.
ಒಟ್ಟಿನಲ್ಲಿ ಜನವರಿ 22 ರ ಕಾರ್ಯಕ್ರಮಕ್ಕೆ ಹೋಗದಿರಲು ಟಿಎಂಸಿ, ಶಿವಸೇನೆ, ಎಡಪಕ್ಷಗಳು ನಿರ್ಧರಿಸಿವೆ. ಆದರೆ ಕಾಂಗ್ರೆಸ್ ಗೊಂದಲಕ್ಕೀಡಾಗಿದೆ. ಒಂದು ವೇಳೆ ಹೋಗದೇ ಇದ್ದರೆ `ಹಿಂದೂ ವಿರೋಧಿ’ ಅಪವಾದದ ಆತಂಕ ಪರಿಸ್ಥಿತಿಯಲ್ಲಿ ಸಿಲುಕಿದೆ. ಇದನ್ನೂ ಓದಿ: ಬಿಜೆಪಿಯವರು ರಾಮ ನಮ್ಮ ಅಭ್ಯರ್ಥಿ ಅಂತಾ ಘೋಷಿಸೋದು ಒಂದೇ ಬಾಕಿ: ಸಂಜಯ್ ರಾವತ್