ಬೆಂಗಳೂರು: ಶಾಸಕರು ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಜೆಡಿಸೆ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ, 11 ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ರಾಜೀನಾಮೆ ವಿಚಾರ ಗೊತ್ತಿಲ್ಲ. ನಾನು ನಮ್ಮ ಶಾಸಕರ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ.
ಜೆಡಿಎಸ್ ಶಾಸಕರು ಯಾಕೆ ರಾಜೀನಾಮೆ ನೀಡಿದ್ದಾರೆ ಎಂದು ಗೊತ್ತಿಲ್ಲ ಎಂದು ಹೇಳಿರುವ ಎಚ್ಡಿಡಿ, 11 ಮಂದಿ ಶಾಸಕರ ರಾಜೀನಾಮೆಗೆ ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೆ ರಾಜೀನಾಮೆಯ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ಇತ್ತ ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆ ಹೈಕಮಾಂಡ್ ಸೂಚನೆ ಮೇರೆಗೆ ಅತೃಪ್ತರ ಮನವೊಲಿಕೆಗೆ ಟ್ರಬಲ್ ಶೂಟರ್ ಡಿಕೆಶಿಒ ಅವರು ಸ್ಪೀಕರ್ ಕಚೇರಿಗೆ ಆಗಮಿಸಿದ್ದರು. ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಿಮ್ಮ ಮೇಲೆ ಗೌರವವಿದೆ. ಈ ವಿಚಾರದಲ್ಲಿ ನೀವು ಮೂಗು ತೂರಿಸಬೇಡಿ, ನಮ್ಮ ನಿರ್ಧಾರ ಅಚಲವಾಗಿದೆ. ನಾವು ಯಾವುದೇ ಕಾರಣಕ್ಕೂ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲು ಸಾಧ್ಯವಿಲ್ಲ. ಈಗಾಗಾಲೇ ನಾವು ರಾಜೀನಾಮೆ ಕೊಟ್ಟಿದ್ದೇವೆ. ಎಂದು ಅತೃಪ್ತ ಶಾಸಕರು ಹೇಳಿದ್ದಾರೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ ಡಿಕೆಶಿ ಕಂಡು ಸಿಟ್ಟಾದ ರಮೇಶ್ ಜಾರಕಿಹೊಳಿ, ನಿಮ್ಮ ಪ್ರಯತ್ನ ಬಿಡಿ. ಪ್ಯಾಚಪ್ ಬೇಡ ಎಂದು ಹೇಳಿದ್ದಾರೆ. ಇತ್ತ ರಾಮಲಿಂಗಾ ರೆಡ್ಡಿ ನಗುತ್ತಲೇ ತಾಳ್ಮೆಯಿಂದ ಕಾದಿದ್ದು ಸಾಕಾಯಿತು. ಈಗ ನಾನು ಕಾಯಲ್ಲ, ಬಹಿರಂಗವಾಗಿ ಹೇಳಿದ್ದು ಆಗಿದೆ. ಹೀಗಾಗಿ ಮತ್ತೆ ನಾನು ಹಿಂದೆ ಸರಿಯಲ್ಲ. ರಾಜೀನಾಮೆಗೆ ನೀವೇ ಕಾರಣ ಅನ್ನೊದನ್ನ ಮರೆಯಬೇಡಿ ಎಂದಿದ್ದಾರೆ.
ಜೆಡಿಎಸ್ ಮಾಜಿ ಅಧ್ಯಕ್ಷ ವಿಶ್ವನಾಥ್, ರಮೇಶ್ ಜಾರಕಿಹೊಳಿ, ಸೋಮಶೇಖರ್, ಪ್ರತಾಪ್ ಗೌಡ ಪಟೀಲ್, ಗೋಪಾಲಯ್ಯ, ಬಿಸಿ ಪಾಟೀಲ್, ಮಹೇಶ್ಕುಮಟಳ್ಳಿ, ನಾರಾಯಣ ಗೌಡ, ಭೈರತಿ ಬಸವರಾಜ್, ಶಿವಾರಂ ಹೆಬ್ಬಾರ್, ರಾಮಲಿಂಗಾ ರೆಡ್ಡಿ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ನೀಡಿದ್ದಾರೆ.