ಕಲಬುರಗಿ: 27 ಮಾಜಿ ಸಚಿವರಿಗೆ ನೀಡಿದ ಗನ್ ಮ್ಯಾನ್ ವಾಪಸ್ ಪಡೆದಿರುವುದು ಸರಿಯಲ್ಲ, ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಇನ್ನು ನನಗೆ ಗನ್ ಮ್ಯಾನ್ ಅವಶ್ಯಕತೆ ಸಹ ಇಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಡಿಕೆಶಿ ಬೆಳಗ್ಗೆ 8 ಗಂಟೆಗೆ ಗಾಣಗಾಪುರಕ್ಕೆ ತೆರಳಿ ಅಲ್ಲಿ ದತ್ತನ ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿದರು. ನಾನು ಈ ಪುಣ್ಯಕ್ಷೇತ್ರದ ಅಭಿವೃದ್ಧಿಗೆ 5 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಅದನ್ನು ತಡೆ ಹಿಡಿದಿದ್ದು, ಅದರ ಬಗ್ಗೆ ನಾನು ಮಾತನಾಡಲ್ಲ ಶ್ರೀ ದತ್ತಾತ್ರೇಯ ಅದನ್ನು ನೋಡಿಕೊಳ್ಳುತ್ತಾನೆ. ಅಧಿಕಾರ ಇರುವುದು ಜನರಿಗೆ ಸಹಾಯ ಮಾಡುವುದಕ್ಕೆ ಯಾರೋ ಕೊಟ್ಟಂತಹ ಕಾರ್ಯಕ್ರಮ ರದ್ದು ಮಾಡುವುದಕ್ಕೆ ಅಲ್ಲ ಎಂದು ಸಿಎಂ ಬಿಎಸ್ವೈ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಬಿಎಸ್ವೈ ಮೇಲೆ ರಮೇಶ್ ಜಾರಕಿಹೊಳಿ ಮನಸ್ತಾಪ ಮಾಡಿಕೊಂಡಿರುವುದು ಅವರಿಗೆ ಬಿಟ್ಟ ವಿಷಯ. ಈ ಹಿಂದೆ ಅವರು ಮೊದಲು ಸಿದ್ದರಾಮಯ್ಯ ನಾಯಕ ಎಂದು ಹೇಳಿದ್ದರು. ಅದಾದ ಬಳಿಕ ನನ್ನನ್ನು ಫ್ರೆಂಡ್ ಎಂದರು. ಇದೀಗ ಬಿಎಸ್ವೈ ನಮ್ಮ ನಾಯಕ ಎಂದು ಹೇಳುತ್ತಿದ್ದಾರೆ ಎಂದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದನ್ನು ಮಾಧ್ಯಮಗಳ ಮುಂದೆ ನಿಂತು ಎಲ್ಲವು ಹೇಳವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಡಿ.ಕೆ ಶಿವಕುಮಾರ್ ಗಾಣಗಾಪುರ ಭೇಟಿ ವೇಳೆ ಅರುಣ್ ರೆಡ್ಡಿ ಹಾಗೂ ಡಿಕೆಶಿ ಅಭಿಮಾನಿಗಳು 2 ಜೆಸಿಬಿಗಳ ಮುಖಾಂತರ ಹೂ ಚೆಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು.