ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯಲ್ಲಿ ನಡೆದ ನಟ ನಾಗಭೂಷಣ್ (Nagbhushan) ಕಾರು ಅಪಘಾತವನ್ನು ಹಿಟ್ ಅಂಡ್ ರನ್ ಕೇಸು ಎಂದು ಹಲವರು ಆರೋಪ ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿಂದತೆ ನಟ ನಾಗಭೂಷಣ್ ಪ್ರತಿಕ್ರಿಯೆ ನೀಡಿದ್ದಾರೆ. ಅಪಘಾತವಾದ ನಂತರ ನಾನು ಎಲ್ಲಿಗೂ ಓಡಿ ಹೋಗಿಲ್ಲ. ನನ್ನ ಕಾರು ಅಲ್ಲಿಯೇ ಇತ್ತು. ನಾನು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದೆ. ಪೊಲೀಸರ ತನಿಖೆಗೂ ನಾನು ಹೋಗಿರುವೆ. ದಯವಿಟ್ಟು ಹಿಟ್ ಅಂಡ್ ರನ್ ಕೇಸು ಎಂದು ಕರೆಯಬೇಡಿ’ ಎಂದರು.
ನನ್ನ ಕಾರು (Car accident) ಕೂಡ ಸ್ಪೀಡ್ ಆಗಿ ಇರಲಿಲ್ಲ. ವೇಗವಾಗಿ ಓಡಿಸುವುದಕ್ಕೂ ಆ ರಸ್ತೆಯಲ್ಲಿ ಆಗುವುದಿಲ್ಲ. ಸಡನ್ನಾಗಿ ಆ ದಂಪತಿ ಫುಟ್ ಪಾತ್ ನಿಂದ ರಸ್ತೆಗೆ ಇಳಿದರು. ಹಾಗಾಗಿ ಅಪಘಾತವಾಯಿತು. ಆ ಕುಟುಂಬಕ್ಕೆ ಆದ ನೋವು ನನಗೆ ಅರಿವಿದೆ. ಅವರ ಕುಟುಂಬವನ್ನು ಸಂಪರ್ಕಿಸಿದ್ದೇವೆ. ಮುಂದಿನ ದಿನಗಳಲ್ಲಿ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡುವೆ ಎನ್ನುವುದು ನಾಗಭೂಷಣ್ ಮಾತು.
ಇಂಥದ್ದೇ ಅಪಘಾತದಲ್ಲಿ ನಾಗಭೂಷಣ್ ತಂದೆ ಬಲಿ
ನಾಗಭೂಷಣ್ ಅವರ ತಂದೆ ಇಂಥದ್ದೇ ಅಪಘಾತದಲ್ಲಿ ನಿಧನರಾಗಿದ್ದು, ಈವರೆಗೂ ಆ ಅಪಘಾತ ಮಾಡಿದವರು ಯಾರು ಎನ್ನುವುದು ಗೊತ್ತಿಲ್ಲವಂತೆ. ‘ಗೌರಿ ಹಬ್ಬದ ದಿನದಂದು ನನ್ನ ತಂದೆಯು ಇಂಥದ್ದೇ ಕಾರು ಅಪಘಾತದಲ್ಲಿ ನಿಧನರಾದರು. ಅದನ್ನು ಮಾಡಿದ್ದು ಯಾರು ಎನ್ನುವುದು ಈವರೆಗೂ ನಮಗೆ ಗೊತ್ತಿಲ್ಲ. ಅಪಘಾತ ಮಾಡಿದ ನಂತರ ಯಾರೂ ಓಡಿ ಹೋಗಬೇಡಿ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ. ನನ್ನ ತಂದೆಯ ಘಟನೆಯಿಂದ ನಾನು ಕಲಿತದ್ದು ಇದನ್ನೆ’ ಅಂದರು.
ಘಟನೆಯ ಬಗ್ಗೆ ಹೆಚ್ಚಿನ ವಿವರ ಹೇಳಿದರೆ ತಪ್ಪಾಗುತ್ತದೆ. ಯಾಕೆಂದರೆ ಅದು ತನಿಖಾ ಹಂತದಲ್ಲಿ ಇದೆ. ಪೊಲೀಸನವರು ಯಾವಾಗ ಕರೆದರೂ ನಾನು ಹೋಗುವೆ. ತನಿಖಾಧಿಕಾರಿಗಳಿಗೆ ಸಹಕರಿಸುವೆ. ಈಗಾಗಲೇ ವಿಚಾರಣೆಗೆ ಹೋಗಿಯೂ ಬಂದಿರುವುದಾಗಿ ನಾಗಭೂಷಣ್ ತಿಳಿಸಿದರು. ಇನ್ನೂ ಆ ಘಟನೆಯ ನೋವಿನಿಂದ ಆಚೆ ಬರುವುದಕ್ಕೆ ಸಾಧ್ಯವಾಗಿಲ್ಲ ಎಂದರು ನಟ.
Web Stories