ಹಾಸನ: ಸಿದ್ದರಾಮಯ್ಯ ಘೋಷಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಗೆ ಕೈ ಬಿಡುವ ಸಾಧ್ಯತೆಗಳಿವೆ. ಉಚಿತ ಬಸ್ ಪಾಸ್ ಕೊಡುತ್ತೇನೆ ಎಂದು ನಾನು ಹೇಳಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ರಾಜ್ಯಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಚುನಾವಣೆಯ ಪೂರ್ವದಲ್ಲಿ ಉಚಿತ ಬಸ್ ಪಾಸ್ ನೀಡುತ್ತೇನೆ ಎಂದು ಹೇಳಿಲ್ಲ ಎಂದರು. ಈ ಮೂಲಕ ಪರೋಕ್ಷವಾಗಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಪ್ರಧಾನಿ ಮೋದಿ ಅವರು ದೇಶ ಪ್ರಗತಿ, ಶ್ರೀಮಂತಿಕೆಯಲ್ಲಿ ವಿಶ್ವದಲ್ಲಿ 6ನೇ ಸ್ಥಾನದಲ್ಲಿದೇ ಎಂದು ಹೇಳುತ್ತಾರೆ. ಆದರೆ ಜನರು ಮಾತ್ರ ಎಲ್ಲದಕ್ಕೂ ಸಬ್ಸಿಡಿ ಕೊಡಿ ಎಂದರೆ ಹೇಗೆ ಸಾಧ್ಯ. ಆದರೆ ಮೋದಿ ಹೇಳಿದಂತೆ ಶ್ರೀಮಂತ ರಾಷ್ಟ್ರವಾಗಿದೆಯಾ ಎಂದು ನಾನು ಯೋಚಿಸಬೇಕಿದೆ ಎಂದರು.
ಸಿಎಂ ಅವರ ಹೇಳಿಕೆಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿ ಸಂಘಟನೆ ಹೋರಾಟಗಾರ ವಿನಯ್ ಬಿದ್ರೆ, ಸಿದ್ದರಾಮಯ್ಯ ಅವರ ಸರ್ಕಾರ ತಮ್ಮ ಬಜೆಟ್ ನಲ್ಲಿ ಉಚಿತ ಬಸ್ ನೀಡುವ ಕುರಿತು ಉಲ್ಲೇಖ ಮಾಡಿದ್ದಾರೆ. ಈ ಯೋಜನೆ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುತ್ತದೆ. ಸಿಎಂ ಕುಮಾರಸ್ವಾಮಿ ಅವರು ಈ ಹಿಂದಿನ ಬಜೆಟನ್ನು ಜಾರಿಗೆ ತರುವುದಾಗಿ ಹೇಳಿದ್ದರು. ಅದ್ದರಿಂದ ಈ ಹೋರಾಟ ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಈ ಹಿಂದೆಯೂ ಸಿಎಂ ಕೆಲ ಸಮಯ ಅವಕಾಶ ಕೇಳಿದ್ದರು. ಸದ್ಯ ಹೋರಾಟ ಮುಂದುವರೆದ್ದು, ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಮಾಡಲಾಗುತ್ತದೆ ಎಂದರು.
ಉಚಿತ ಬಸ್ ಪಾಸ್ಗೆ ಆಗ್ರಹಿಸಿ ಇಂದು ಬೆಳಗ್ಗೆ ಹಿಂದೆ ರಾಜ್ಯಾದ್ಯಂತ ಕಾಲೇಜ್ ಬಂದ್ ಮಾಡಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಪ್ರಮುಖವಾಗಿ ಕಲಬುರಗಿ, ದಾವಣಗೆರೆ, ಮಂಡ್ಯ, ರಾಯಚೂರು ಸೇರಿದಂತೆ ರಾಜ್ಯಾದ ಹಲವು ಜಿಲ್ಲಾ ಹಾಗೂ ತಾಲೂಕು ಘಟಕಗಳಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ವಿರುದ್ಧ ಷೋಷಣೆ ಕೂಗಿದ್ದರು.