ಬೆಳಗಾವಿ: ಬಿಜೆಪಿಗೆ ಸೇರಲಿಲ್ಲ ಎಂದು ನನ್ನನ್ನು ತಿಹಾರಿ ಜೈಲಿಗೆ ಕಳಿಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಚಿವ ಈಶ್ವರಪ್ಪನಿಗೆ ಟಾಂಗ್ ಕೊಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಸಪೋರ್ಟ್ ಮಾಡಲಿಲ್ಲ ಎಂದು ನನ್ನನ್ನು ತಿಹಾರಿ ಜೈಲಿಗೆ ಕಳಿಸಿದ್ದರು. ಇದಕ್ಕೆಲ್ಲಾ ದಾಖಲೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇವೆ ಎಂಬ ಬಿಎಸ್ವೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರಿಗಾದ ನೋವನ್ನು ಬಿಜೆಪಿ ಅವರ ಮೇಲೆ ಹೇಳಲು ಆಗುವುದಿಲ್ಲ. ಅದರಿಂದಾಗಿ ಅವರ ಕೋಪ-ತಾಪವನ್ನು ಕಾಂಗ್ರೆಸ್ ಅವರ ಮೇಲೆ ಹೊರ ಹಾಕುತ್ತಿದ್ದಾರೆ ಎಂದರು.
ಕಾಂಗ್ರೆಸ್ಸನ್ನು ಶಾಶ್ವತವಾಗಿ ವಿಪಕ್ಷ ಸ್ಥಾನದಲ್ಲಿ ಕೂರಿಸುತ್ತಾರೆ ಎಂದಿದ್ದಾರೆ. ಆದರೆ ಅವರ ಪಕ್ಷದಲ್ಲೇ ಏನಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸರ್ಕಾರದ ಸ್ಥಿರತೆಯನ್ನು ನಾವು ಹಾಳು ಮಾಡುತ್ತಿಲ್ಲ. ಬದಲಿಗೆ ಅವರ ಪಕ್ಷದವರೇ ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಸ ಮಾಡಿ, ಕಾರ್ಯಕರ್ತರ ಕುಂದು ಕೊರತೆಗಳನ್ನು ಆಲಿಸಿದ್ದೇನೆ. ಒಂದು ಕಡೆ ಭಿನ್ನಾಭಿಪ್ರಾಯ ಇತ್ತು. ಅದನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಕಡೆ ಒಮ್ಮತದ ಅಭ್ಯರ್ಥಿ ಆಯ್ಕೆ ಸೂಚಿಸಿದ್ದಾರೆ. ಎಲ್ಲೆಡೆ ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದೇ ಕಾಂಗ್ರೆಸ್ನ ಗೆಲುವು. ಆದರೆ ಬಿಜೆಪಿಯಲ್ಲಿ ಹಾಗಿಲ್ಲ, ಸಿಂಗಲ್ ಕ್ಯಾಂಡಿಡೇಟ್ ಹಾಕಿದ್ದಾರೆ. ಒಂದೇ ಸ್ಟೇಜ್, ಒಬ್ಬರೇ ಎರಡು ಭಾಷಣ ಮಾಡುವಷ್ಟು ಬಿಜೆಪಿ ಇಷ್ಟು ವೀಕ್ ಆಗಿದೆ ಅಂತಾ ನಾನು ತಿಳಿದುಕೊಂಡಿರಲಿಲ್ಲ ಎಂದು ವ್ಯಂಗ್ಯವಾಡಿದರು.
ನಮ್ಮಲ್ಲಿ ರೆಬಲ್ ಯಾರೂ ಇಲ್ಲ ಜೊತೆಗೆ ಪಕ್ಷಕ್ಕೆ ಮೋಸ ಮಾಡಿದವರಿಲ್ಲ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಡಿಕೆಶಿ ಟಾಂಗ್ ನೀಡಿದರು. ಇದೇ ವೇಳೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದ ನಂತರ ಅಧಿವೇಶನ ಮಾಡಿರಲಿಲ್ಲ. ನಾವು ಒತ್ತಾಯ ಮಾಡಿದಾಗ ಒತ್ತಡದ ಮೇಲೆ ಅಧಿವೇಶನ ಮಾಡುತ್ತಿದ್ದಾರೆ. ಇಷ್ಟಾದರೂ ಮುಂದೆ ಹಾಕುವ ಪ್ರಯತ್ನ ಪಡುತ್ತಿದ್ದರು. ಆದರೆ ನಾವು ಬದಲಾವಣೆ ಮಾಡಿದರೆ ಸಾಮೂಹಿಕವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಸ್ಪೀಕರ್ಗೆ ಹೇಳಿದ್ದೆವು. ಇದರಿಂದಾಗಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ವಿಶೇಷ ಕ್ಲಸ್ಟರ್ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಂಕು ಹೆಚ್ಚು: ಬೊಮ್ಮಾಯಿ
ನಿನ್ನೆ ರಾಯಭಾಗದಲ್ಲಿ 40 ನೆರೆ ಸಂತ್ರಸ್ತ ಹೆಣ್ಣುಮಕ್ಕಳು ಸಾಮೂಹಿಕ ಆತ್ಮಹತ್ಯೆಗೆ ಅವಕಾಶ ಮಾಡಿಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ. ಈ ಕುರಿತಾಗಿ ಅಧಿವೇಶನದಲ್ಲಿ ಖಂಡಿತವಾಗಿ ಹೋರಾಟ ಮಾಡುತ್ತೇವೆ. ಸರ್ಕಾರದ ವೈಫಲ್ಯ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ
ಮಹದಾಯಿ ವಿಚಾರವಾಗಿ ಮಾತನಾಡಿದ ಅವರು, ತೀರ್ಪು ಬಂದಿರುವುದರಿಂದ ಮಹದಾಯಿಯ ಕೆಲಸವನ್ನು ಮಾಡಲು ಬಿಜೆಪಿ ಅವರಿಗೆ ಏನು ತೊಂದರೆಯಾಗಿದೆ. ಮಹದಾಯಿ ತೀರ್ಪು ಬಂದಿದ್ದರಿಂದ ತಕ್ಷಣ ಕೆಲವನ್ನು ಆರಂಭಿಸಬೇಕು. ಬಸವರಾಜ್ ಬೊಮ್ಮಾಯಿ ಅವರಿಗೆ ಜಲಸಂಪನ್ಮೂಲ ಸಚಿವರಾಗಿ ಅನುಭವವಿದೆ. ಆದರೂ ಯಾಕೆ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.