ರಾಮನಗರ: ನಾನು ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ನಿರ್ಧರಿಸಿರುವುದಾಗಿ ಹೇಳಿದರು. ನನಗೂ 72 ವರ್ಷ ವಯಸ್ಸಾಗಿದೆ. ಇನ್ನು 5 ವರ್ಷಗಳ ನಂತರ ಚುನಾವಣೆ ಎದುರಿಸಬೇಕಾಗುತ್ತದೆ. ಹಾಗಾಗಿ ಈಗಿನಿಂದಲೇ ಬೇರೆಯವರಿಗೆ ತಯಾರಿ ಮಾಡಬೇಕಿದೆ. ನಾನು ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸದೆ ಯುವ ನಾಯಕರನ್ನು ಚುನಾವಣೆ ಎದುರಿಸಲು ತಯಾರಿ ಮಾಡಬೇಕಿದೆ ಎಂದರು.
ಚುನಾವಣೆಗೆ ನಿಲ್ಲಬೇಕಾದರೆ ಈಗಿನಿಂದಲೇ ಸಾಕಷ್ಟು ಸಿದ್ದತೆಗಳಾಗಬೇಕು. ಕಳೆದ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಪ್ರತಿ ಬಾರಿ ಬದಲಾವಣೆಯಾಗಿದ್ದರಿಂದಲೇ ಚನ್ನಪಟ್ಟಣಕ್ಕೆ ಈ ಪರಿಸ್ಥಿತಿ ಬಂದಿದೆ. ಹಾಗಾಗಿ ಯುವ ನಾಯಕರಲ್ಲಿ ಒಬ್ಬರನ್ನ ಗುರ್ತಿಸಿ ಅವರನ್ನೇ ನಾಯಕರನ್ನಾಗಿ ಮಾಡಲಾಗುತ್ತದೆ. ನಾನು ಯುವಕರಿಗೆ ಸಲಹೆ ಸೂಚನೆ ನೀಡುತ್ತ ಅವರ ಮೂಲಕವೇ ಚುನಾವಣೆ ಎದುರಿಸಲಾಗುವುದು ಎಂದರು.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಮಾಡಿದ್ದರು. ರಾಜ್ಯಾದ್ಯಂತ ಕುತೂಹಲ ಹುಟ್ಟು ಹಾಕಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ವಿಜಯ ಪತಾಕೆಯನ್ನು ಹಾರಿಸಿದ್ದರು. ಸೋಲಿನ ಹಿನ್ನೆಲೆಯಲ್ಲಿ ಎಚ್.ಎಂ.ರೇವಣ್ಣ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.