ಲಕ್ನೋ: ಪದ್ಮವಿಭೂಷಣ ಪುರಸ್ಕೃತ ರಾಮಭದ್ರಾಚಾರ್ಯ ಸ್ವಾಮೀಜಿಯವರು (Rambhadracharya Swamiji) ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (General Upendra Dwivedi) ಅವರಿಗೆ ದೀಕ್ಷೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ʻಗುರುದಕ್ಷಿಣೆ’ ರೂಪದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು (PoK) ಕೊಡುವಂತೆ ಅವರು ಕೇಳಿದ್ದಾರೆ.
ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅವರ ಪತ್ನಿ ಸುನಿತಾ ದ್ವಿವೇದಿ ಬುಧವಾರ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಉಪೇಂದ್ರ ಅವರಿಗೆ ಅತ್ಯಂತ ಶಕ್ತಿಶಾಲಿ ಮತ್ತು ಪವಿತ್ರವಾದ ರಾಮಮಂತ್ರದ ದೀಕ್ಷೆ ನೀಡಲಾಯಿತು. ಈ ಮಂತ್ರವನ್ನು ಮಾತೆ ಸೀತೆಯಿಂದ ಹನುಮಂತ ಪಡೆದಿದ್ದ ಎಂದು ಸ್ವಾಮೀಜಿ ವಿವರಿಸಿದ್ದಾರೆ.
ದೀಕ್ಷೆಯು ಹಿಂದೂ ಧರ್ಮದ ಒಂದು ಧಾರ್ಮಿಕ ಪ್ರಕ್ರಿಯೆ. ದೀಕ್ಷೆ ಕೊಡುವವರನ್ನು ಗುರುವಾಗಿಯೂ, ತೆಗೆದುಕೊಳ್ಳುವವರನ್ನು ಶಿಷ್ಯರನ್ನಾಗಿಯೂ ಪರಸ್ಪರರು ಸ್ವೀಕರಿಸುತ್ತಾರೆ. ದೀಕ್ಷೆ ಪಡೆದ ದ್ವಿವೇದಿ ಅವರು ಗುರುದಕ್ಷಿಣೆಯಾಗಿ ಏನನ್ನು ನೀಡಬೇಕು ಎಂದು ಕೇಳಿದರು. ಅದಕ್ಕೆ ಪಿಒಕೆಯನ್ನು ಗುರುದಕ್ಷಿಣೆಯಾಗಿ ಪಡೆಯಲು ಬಯಸುತ್ತೇನೆ ಎಂದು ಹೇಳಿದೆ ಎಂದಿದ್ದಾರೆ.
ದ್ವಿವೇದಿಯವರಿಗೆ ದೀಕ್ಷೆ ನೀಡಿದ್ದಕ್ಕೆ ನನಗೆ ಹೆಮ್ಮೆಯಿದೆ. ದೇಶಕ್ಕೆ ಶಸ್ತ್ರದಷ್ಟೇ ಶಾಸ್ತ್ರ ಮತ್ತು ಸದಾಚಾರವೂ ಮುಖ್ಯ ಎಂದು ಅವರು ಹೇಳಿಕೊಂಡಿದ್ದಾರೆ.