ರಾಯಚೂರು: 2028ಕ್ಕೆ ನಾನೇ ಸಿಎಂ ಅಭ್ಯರ್ಥಿ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ರಾಯಚೂರಿನಲ್ಲಿ (Raichur) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಈ ಅವಧಿಗೆ ಸಿಎಂ ಆಗಲು ಬರುವುದಿಲ್ಲ. ಈಗ ಮುಖ್ಯಮಂತ್ರಿಗಳು ಇದ್ದಾರೆ. ಹಾಗಾಗಿ ಅಂತಹ ಅವಶ್ಯಕತೆ ಬರಲ್ಲ. ಮುಂದಿನ ಅವಧಿಗೆ ನಾನು ಸಿಎಂ ಆಕಾಂಕ್ಷಿ, ಸಿಎಂ ಸ್ಥಾನದ ವಿಚಾರಗಳು ಈಗ ಇಲ್ಲ ಎಂದಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ವಿಚಾರವಾಗಿ, ರಹಸ್ಯ ಸಭೆ ಏನು ಇರಲಿಲ್ಲ. ಎಲ್ಲರೂ ಕೂಡಿಯೇ ಸಭೆ ಮಾಡಿದ್ದೇವೆ. ರಹಸ್ಯ ಸಭೆ ಎನ್ನುವ ಪ್ರಶ್ನೆಯೇ ಇಲ್ಲ. ಅದು ಊಟದ ಸಭೆ ಅಷ್ಟೇ. ಸಭೆಯಲ್ಲಿ ಅಂತಾ ರಾಜಕೀಯ ಚರ್ಚೆ ಯಾವುದು ಆಗಿಲ್ಲ. ಸಂಪುಟ ವಿಸ್ತಾರಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 60% ಕಮಿಷನ್ ಸರ್ಕಾರವಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರೆಲ್ಲ ಆರೋಪ ಮಾಡುತ್ತಾರೆ. ಅದನ್ನು ಸಾಬೀತು ಮಾಡಬೇಕು. ಸುಮ್ಮನೇ ಹೇಳುವುದರಿಂದ ಏನೂ ಆಗುವುದಿಲ್ಲ ಎಂದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಒತ್ತಾಯ ವಿಚಾರವಾಗಿ, ಅವರ ಆಪ್ತನ ಹೆಸರು ಇದೆ. ಈಶ್ವರಪ್ಪನದ್ದು ನೇರವಾಗಿ ಪತ್ರದಲ್ಲಿ ಹೆಸರು ಇತ್ತು. ಆಪ್ತರು, ಪಿಎಗಳ ಹೆಸರು ಇದ್ರೆ ಸಚಿವರು ನೇರವಾಗಿ ಹೊಣೆಗಾರರು ಆಗಲ್ಲ. ತನಿಖೆ ನಡೆಯುತ್ತಿದೆ ನಡೆಯಲಿ ಎಂದು ಹೇಳಿದ್ದಾರೆ.