ಮಂಡ್ಯ: ಮುಂದಿನ ಲೋಕಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಟ್ಟರು ನಾನು ಸ್ಪರ್ಧೆ ಮಾಡಲ್ಲ. ಆದರೆ ಮೈತ್ರಿ ಸರ್ಕಾರ ರಚನೆಯಾಗಿರುವುದರಿಂದ ಕ್ಷೇತ್ರದಲ್ಲೂ ಕೂಡ ಮೈತ್ರಿ ಮುಂದಾದರೆ ಒಳ್ಳೆಯದು ಎಂದು ಮಾಜಿ ಸಚಿವ ಅಂಬರೀಶ್ ಹೇಳಿದ್ದಾರೆ.
ಅಂಬರೀಶ್ ಅವರು, ಹೊಸಹಳ್ಳಿ ಬೋರೇಗೌಡ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಬಜೆಟ್ ನಲ್ಲಿ ಮಂಡ್ಯಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ ಎನ್ನಲಾಗಿದೆ. ಇದು ಒಳ್ಳೆಯದು ಕ್ಷೇತ್ರದ ಜನರು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡಿದ್ದಾರೆ. ಅದ್ದರಿಂದ ಹೆಚ್ಚಿನ ಅನುದಾನ ನೀಡಬೇಕು. ಆದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಅಂಬಿಗೆ ವಯಸ್ಸಾಗಿದೆ ಎಂದು ಈಗಾಗಲೇ ಹೇಳಿದ್ದೇನೆ ಎಂದು ಹೇಳಿ ನಗೆ ಬೀರಿದರು.
ಜಿಲ್ಲೆಯ ಹಲವು ಕೆರೆಗಳಿಗೆ ಸಂಬಂಧಿಸಿದ ನೀರಾವರಿ ಅಭಿವೃದ್ಧಿ ಯೋಜನೆಗಳ ಸಿದ್ಧತೆ ನಮ್ಮ ಅವಧಿಯಲ್ಲೇ ನಡೆಯಿತು. ಅವುಗಳು ಕುಮಾರಸ್ವಾಮಿ ಕ್ಯಾಬಿನೇಟ್ ಅವರ ಮುಂದೇ ಬರಲಿದೆ ಅವುಗಳಿಗೂ ಪೂರಕವಾಗಿ ಸ್ಪಂದನೆ ನೀಡಿದರೆ ಒಳ್ಳೆಯದು. ಹಲವು ಗ್ರಾಮಾಂತರ ಜನರಿಗೆ ಇದರಿಂದ ಉಪಯೋಗವಾಗಲಿದೆ ಎಂದರು.
ರಾಜ್ಯ ವಿಧಾಸಭಾ ಚುನಾವಣೆಯ ವೇಳೆ ಜೆಡಿಎಸ್ಗೆ ಬೆಂಬಲ ನೀಡಿದ್ದೆ ಎಂಬುವುದು ಸುಳ್ಳು. ಅಂತಹ ಕೆಲಸ ನಾನು ಎಂದಿಗೂ ಮಾಡಲ್ಲ. ನಾನೇನಿದ್ದರೂ ಸ್ಟ್ರೇಟ್ ಫಾರ್ವಾರ್ಡ್. ಕ್ಷೇತ್ರದ ಜನತೆಯನ್ನು ನಾನು ಬಿಡುವುದಲ್ಲ. ಆದರೆ ನಾನು ಯಾವುದೇ ಪಕ್ಷದಲ್ಲೂ ಇಲ್ಲ. ಕಾಂಗ್ರೆಸ್ ನಲ್ಲಿ ನಾನು ಇದ್ದಿದ್ದರೆ ಉತ್ತಮವಾಗಿರುತ್ತಿತ್ತು, ಆದರೆ ಅದು ಸಾಧ್ಯವಾಗಿಲ್ಲ ಎಂದರು. ಆದರೆ ನೀವು ಯಾವ ಪಕ್ಷದಲ್ಲಿ ಎಂಬ ಪ್ರಶ್ನೆಗೆ ಅಂಬರೀಶ್ ಪಕ್ಷದಲ್ಲೇ ಇದ್ದೇನೆ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದರು.
ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದ ಮಂಡ್ಯ ನಗರಸಭೆ ಅಧ್ಯಕ್ಷರಾಗಿದ್ದ ಹೊಸಹಳ್ಳಿ ಬೋರೇಗೌಡ ನಿವಾಸಕ್ಕೆ ಮಾಜಿ ಸಚಿವ ಅಂಬರೀಶ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಅಂದಹಾಗೇ ಬೋರೇಗೌಡ ಅವರು ಅಂಬರೀಶ್ ಅಪ್ಪಟ ಅಭಿಮಾನಿಯಾಗಿದ್ದು, ಅವರ ನಿಧನದ ವೇಳೆ ಅಂಬರೀಶ್ ಬಾರದಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು ಸ್ಪಷ್ಟನೆ ನೀಡಿದ ಅಂಬರೀಶ್, ನಾನು ಸಾವಿನ ಮನೆಗೆ ಹೋಗುವುದಿಲ್ಲ. ಅಲ್ಲಿಗೆ ಹೋದರೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಾರೆ. ಹಿಂದೊಮ್ಮೆ ಇದೇ ರೀತಿ ಆಗಿತ್ತು. ತಿಥಿ ಕಾರ್ಯಕ್ಕೆ ಹೋಗಿದ್ದಾಗ ಲಾರಿಯಲ್ಲಿ ಬಂದು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿದ್ದರು. ಇದು ಎಂತಹ ಅವಮಾನ ಅಲ್ಲವೇ? ಈ ಕಾರಣಕ್ಕೆ ಅಂದು ನಾನು ಬರಲಿಲ್ಲ ಎಂದು ಹೇಳಿದರು.