ಬೆಂಗಳೂರು: ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ತನ್ನ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಅರೆಸ್ಟ್ ಆಗಿದ್ದಾರೆ. ಈ ಬಗ್ಗೆ ಸುನೀಲ್ ಹೆಗ್ಗರವಳ್ಳಿ ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ್ದಾರೆ.
ಈ ಸುದ್ದಿಯಿಂದ ನಿಮಗೆ ಹೇಗೆ ಶಾಕ್ ಆಗಿದೆಯೋ ಅದೇ ರೀತಿ ನನಗೂ ಶಾಕ್ ಆಗಿದೆ. ನಿನ್ನೆ ತನಕ ಏನೂ ಗೊತ್ತಿರಲಿಲ್ಲ. ಬೆಳಗ್ಗೆ ನಗರದ ಹಿರಿಯ ಪೊಲೀಸರು ನನ್ನನ್ನು ಕರೆಸಿ ವಿಷಯ ತಿಳಿಸಿದಾಗ ನಾನು ಕೂಡ ನಂಬೋ ಸ್ಥಿತಿಯಲ್ಲಿ ಇರಲಿಲ್ಲ. ಯಾಕಂದ್ರೆ ರವಿ ಬೆಳಗೆರೆ ನನ್ನನ್ನು ಹತ್ಯೆ ಮಾಡಿಸಲು ಪ್ರಯತ್ನಿಸುತ್ತಾರೆಂದರೆ ನಂಬಲಾರದ ವಿಷಯವಾಗಿತ್ತು. ಆದ್ರೆ ಅವರು ಪ್ರತಿಯೊಂದನ್ನೂ ಕೂಡ ದಾಖಲೆಗಳ ಸಮೇತ ವಿವರಿಸಿದಾಗ, ಹಂತಕನ ಬಗ್ಗೆ ಮಾಹಿತಿ ಕೊಟ್ಟಾಗ, ಅವನು ಈ ಹಿಂದೆಯೂ ಹತ್ಯೆಗೆ ಯತ್ನಿಸಿದ್ದನ್ನು ಗಮನಿಸಿದಾಗ ಹಾಗೂ ಹಿಂದೆ ನಡೆದ ಘಟನೆಗಳನ್ನು ಪರಾಮರ್ಶಿಸಿದಾಗ ನನಗೂ ಇದು ಸತ್ಯ ಎನಿಸಿದೆ ಎಂದು ಹೇಳಿದ್ರು.
ಈ ಹಿಂದೆಯೂ ಕೊಲೆಗೆ ಯತ್ನ?: 2014ರಲ್ಲಿ ನಾನು ಕೆಲಸ ಬಿಟ್ಟಾಗ ಒಂದು ಬಾರಿ ಪ್ರಯತ್ನ ಮಾಡಿದ್ದರು. ಯಾರೋ ಇನ್ವೆಸ್ಟರ್ಸ್ ಬರ್ತಾರೆ, ಚಾನಲ್ ಬಗ್ಗೆ ಮಾತನಾಡಬೇಕು ಬಾ ಎಂದು ಕಚೇರಿ ಬಳಿ ನನ್ನನ್ನು ಕರೆಸಿದ್ದರು. ಆದ್ರೆ ನಾನು ಅಲ್ಲಿಗೆ ಹೋದಾಗ ಯಾವುದೇ ಇನ್ವೆಸ್ಟರ್ಸ್ ಇರಲಿಲ್ಲ. ಕೆಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಅಲ್ಲಿದ್ದರು. ಅದನ್ನು ಗಮನಿಸಿದಾಗ ಅಂದು ಕೂಡ ಕೊಲೆಗೆ ಯತ್ನಿಸಿದ್ದರು ಅಂತ ಈಗ ಅನ್ನಿಸುತ್ತಿದೆ ಎಂದು ತಿಳಿಸಿದ್ರು.
ಆರೋಪಿಗಳ ಹೆಸರು ಗೊತ್ತಿಲ್ಲ. ಅವರ ಬಗ್ಗೆ ಏನೂ ಗೊತ್ತಿಲ್ಲ. ಅವರನ್ನ ಗಮನಿಸಿದಾಗ ಈ ಹಿಂದೆ ಎರಡು ಮೂರು ಬಾರಿ ಅವರು ಕಚೇರಿಗೆ ಬಂದಾಗ, ಇವರು ಬೇರೆ ಬೇರೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಎಂದು ರವಿ ಬೆಳಗೆರೆ ಹೇಳಿದ್ರು. ಅವರ ಮುಖಪರಿಚಯ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಅಂತ ಹೇಳಿದ್ರು.
ನನ್ನ-ರವಿ ಬೆಳಗೆರೆ ಸ್ನೇಹ 17 ವರ್ಷಗಳದ್ದು, ಅದರಲ್ಲಿ 14 ವರ್ಷ ಅವರ ಜೊತೆ ಕೆಲಸ ಮಾಡಿದ್ದೀನಿ. ಯಾವ ಕಾರಣಕ್ಕೆ ನನ್ನ ಕೊಲೆಗೆ ಸುಪಾರಿ ಕೊಟ್ಟರು ಅಂತ ಗೊತ್ತಿಲ್ಲ. ಅದನ್ನ ನೀವು ರವಿ ಬೆಳಗೆರೆ ಅವರನ್ನೇ ಕಳಬೇಕು ಅಥವಾ ತನಿಖೆ ಮಾಡುತ್ತಿರುವ ಅಧಿಕಾರಿಗಳೇ ಇದನ್ನ ಸ್ಪಷ್ಟಪಡಿಸಬೇಕು ಅಂದ್ರು.
ಸದ್ಯ ಸಿಸಿಬಿ ಪೊಲೀಸರು ಹಾಯ್ ಬೆಂಗಳೂರು ಕಚೇರಿಯಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ರವಿ ಬೆಳಗೆರೆ ಅವರ ಕಾರನ್ನ ತಪಾಸಣೆ ಮಾಡಿದ್ದಾರೆ. ಸುನೀಲ್ ಹೆಗ್ಗರವಳ್ಳಿ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದಾರೆ.
ಸುನಿಲ್ ಹೆಗ್ಗರವಳ್ಳಿಗೆ ಆಶ್ರಯ ನೀಡಿದ್ದು ಗೌರಿ ಲಂಕೇಶ್. ಆದ್ದರಿಂದ ಗೌರಿ ಲಂಕೇಶ್ ಹತ್ಯೆಗೂ, ಈ ಪ್ರಕರಣಕ್ಕೂ ಸಂಬಂಧವಿದೆಯಾ ಎಂಬ ಆ್ಯಂಗಲ್ ನಲ್ಲೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.