ಬೆಂಗಳೂರು: ವರ್ಷದ 365 ದಿನವೂ ನಟ ಸಾರ್ವಭೌಮ ಡಾ.ರಾಜ್ಕುಮಾರ್ ಅವರ ಸ್ಮಾರಕವುಳ್ಳ ಪುಣ್ಯಭೂಮಿಗೆ ಅಭಿಮಾನಿಗಳು ಭೇಟಿ ನೀಡುತ್ತಿರುತ್ತಾರೆ. ಆದ್ರೆ ಹಿರಿಯ ಪುತ್ರ ಶಿವರಾಜ್ಕುಮಾರ್ ಮಾತ್ರ ನಾನು ಅಪ್ಪಾಜಿ ಸ್ಮಾರಕಕ್ಕೆ ಪದೇ ಪದೇ ಭೇಟಿ ನೀಡಲ್ಲ ಅಂತಾ ಹೇಳಿದ್ದಾರೆ.
ವರ್ಷವೆಲ್ಲ ಡಾ. ರಾಜ್ಕುಮಾರ್ ಸ್ಮಾರಕಕ್ಕೆ ಕನ್ನಡ ಕಲಾಭಿಮಾನಿಗಳು ಬಂದು ಪೂಜೆ ಮಾಡಿಕೊಂಡು ಹೋಗ್ತಾರೆ. ಇನ್ನು ಮುತ್ತು ರಾಜರ ಹುಟ್ಟುಹಬ್ಬ, ಪುಣ್ಯಸ್ಮರಣೆಗೆ ಸಾವಿರಾರು ಸಂಖ್ಯೆಯಲ್ಲಿ ಬಂದು ಹೋಗ್ತಾರೆ. ಆದರೆ ನಾನು ಯಾಕೆ ಅಪ್ಪನ ಸ್ಮಾರಕ್ಕೆ ಯಾಕೆ ಹೋಗಲ್ಲ ಅನ್ನೋದನ್ನ ಶಿವರಾಜ್ ಕುಮಾರ್ ರಿವಿಲ್ ಮಾಡಿದ್ದಾರೆ.
ತಮ್ಮ ಪುನೀತ್ರಾಜ್ ಕುಮಾರ್ ಹುಟ್ಟುಹಬ್ಬಕ್ಕ ವಿಶ್ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್ಕುಮಾರ್, ಅಮ್ಮನನ್ನ ಈ ವರ್ಷ ಮಿಸ್ ಮಾಡ್ಕೋಂತಿದ್ದಿರಾ ಅನ್ನೋ ಪ್ರಶ್ನೆಗೆ, ಈ ದಿನ ಮಾತ್ರವಲ್ಲ ಯಾವಾಗಲೂ ಅವರನ್ನ ನೆನಪು ಮಾಡಿಕೊಳ್ಳುತ್ತಿರುತ್ತೇವೆ. ಅಪ್ಪ-ಅಮ್ಮ ನಮ್ಮಿಂದ ದೂರವಾಗಿದ್ದಾರೆ ಅಂತ ನಮಗೆ ಅನ್ನಿಸುವುದಿಲ್ಲ. ಇಲ್ಲೇ ಎಲ್ಲೋ ಇದ್ದಾರೆ, ಯಾವುದೋ ಊರಿಗೆ ಹೋಗಿದ್ದಾರೆ ಬೇಗ ಬರ್ತಾರೆ ಅಂತ ಫೀಲ್ ಆಗುತ್ತದೆ. ಅದಕ್ಕೆ ನಾನು ಸ್ಮಾರಕಕ್ಕೂ ಜಾಸ್ತಿ ಹೋಗಲ್ಲ ಅಂತಾ ಶಿವಣ್ಣ ಉತ್ತರಿಸಿದ್ರು.
ಅಪ್ಪಾಜಿ ಹಾಗೂ ಅಮ್ಮನನ್ನ ಸಮಾಧಿಯಲ್ಲಿ ನೋಡೋಕ್ಕೆ ಕಷ್ಟವಾಗುತ್ತದೆ. ಸ್ಮಾರಕ ನೋಡಿದಾಗ ಅವ್ರು ನಮ್ಮ ಜೊತೆಯಲ್ಲಿ ಇಲ್ಲವಲ್ಲಾ ಅನ್ನೋ ನೋವು ಜಾಸ್ತಿಯಾಗುತ್ತದೆ. ಈ ಕಾರಣಕ್ಕೆ ನಾನು ಜಾಸ್ತಿ ಸ್ಮಾರಕಕ್ಕೆ ಭೇಟಿ ಕೊಡುವುದಿಲ್ಲ ಎಂದು ಶಿವಣ್ಣ ಹೇಳಿದರು.