ಹುಬ್ಬಳ್ಳಿ: ಸಂತೋಷ್ ಅವರ ಹೇಳಿಕೆಯನ್ನು ಕೇಳದೇ ನಾನು ಹೇಗೆ ಪ್ರತಿಕ್ರಿಯೆ ನೀಡಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.
ಡಿಎನ್ಎ ನೋಡಿ ಪಕ್ಷದ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿಕೆ ವಿಚಾರದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ನನಗೆ ಗೊತ್ತಿಲ್ಲ. ಹೀಗಾಗಿ ಅದನ್ನು ಕೇಳದೇ ನಾನು ಹೇಗೆ ಪ್ರತಿಕ್ರಿಯೆ ನೀಡಲಿ ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಪಾಕಿಸ್ತಾನ ಏಜೆಂಟರಿದ್ದಂತೆ. ಅವರಿಗೆ ಭಾರತಕ್ಕಿಂತ ಪಾಕಿಸ್ತಾನದ್ದೇ ಹೆಚ್ಚಿನ ಚಿಂತೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲ ಭಾಗದಲ್ಲಿಯೂ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಹೈದರಾಬಾದ್ ಕರ್ನಾಟಕದಲ್ಲಿ ಎಲ್ಲ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಈ ರಾಜ್ಯದಲ್ಲಿ ಮ್ಯಾಜಿಕ್ ರೀತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಜೀನ್ಸ್, ಡಿಎನ್ಎ ನೋಡಿ ಟಿಕೆಟ್ ಕೊಡ್ತಾ ಹೋದ್ರೆ ಹೇಗೆ: ಬಿ.ಎಲ್ ಸಂತೋಷ್ ಪ್ರಶ್ನೆ
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಧರ್ಮದ ಚುನಾವಣೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯ ಮುಂಚೆ ಧರ್ಮವನ್ನು ಒಡೆಯಲು ಹೋದವರು ಈಗ ಎಲ್ಲ ಒಂದೇ ಎನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ವಿನಯ ಕುಲಕರ್ಣಿಗೆ ಟಾಂಗ್ ನೀಡಿದ್ರು.
ಕಳೆದ ವಿಧಾನಸಬಾ ಚುನಾವಣೆಯಲ್ಲಿ ಪೆಟ್ಟು ತಿಂದ ಮೇಲೆ ಈಗ ಹೋರಾಟ ಕೈಬಿಟ್ಟಿದ್ದೇವೆ ಎನ್ನುತ್ತಿದ್ದಾರೆ. ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿಕೆಶಿ ಕ್ಷಮೆ ಕೇಳಿದ ಮೇಲೆ ಎಂ.ಬಿ.ಪಾಟೀಲ್ ಹಾಗೂ ಡಿಕೆಶಿ ಮಧ್ಯೆ ಜಟಾಪಟಿ ನಡೆದಿದೆ. ಧಾರವಾಡ ಅಭ್ಯರ್ಥಿ ಹೋರಾಟ ಕೈಬಿಟ್ಟಿದ್ದೇವೆ ಎಂದರೆ ಎಂ.ಬಿ ಪಾಟೀಲ್ ಅವರು ಕುಲಕರ್ಣಿಯನ್ನು ಪ್ರಶ್ನೆ ಮಾಡಬೇಕಿದೆ. ಲಿಂಗಾಯತ ಧರ್ಮದ ವಿಚಾರವಾಗಿ ಹೋರಾಟ ಮಾಡಿದ ಕಾಂಗ್ರೆಸ್ನವರು ಇದರ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ್ರು.
ಧಾರವಾಡ ಕ್ಷೇತ್ರಕ್ಕೆ ವಿನಯ ಕುಲಕರ್ಣಿಯವರ ಕೊಡುಗೆ ಏನಿದೆ ಎಂದು ಮರು ಪ್ರಶ್ನೆ ಹಾಕಿದ ಶೆಟ್ಟರ್, ಧರ್ಮ ರಾಜಕಾರಣ ಮಾಡುವುದನ್ನ ಬಿಡಿ, ಕ್ಷೇತ್ರದ ಜನತೆಗೆ ಎಲ್ಲವೂ ಗೊತ್ತಿದೆ. ಮಹಾಮೈತ್ರಿ ಕೂಟ ಮೂರಾಬಟ್ಟೆಯಾಗಿರುವ ಕೂಟವಾಗಿದೆ ಅಂದ್ರು.
ಇದೇ ವೇಳೆ ಐಟಿ ಇಲಾಖೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೇಜಾವಾಬ್ದಾರಿ ಹೇಳಿಕೆಗಳನ್ನ ನೀಡುವುದು ನಿಲ್ಲಿಸಬೇಕು. ಹೈಕೋರ್ಟ್ ಆದೇಶದ ಪ್ರಕಾರ ವಿನಯ ಕುಲಕರ್ಣಿಯವರ ಮೇಲೆ ಕೇಸ್ ದಾಖಲಾಗಿದೆ. ಇದರಲ್ಲಿ ಬಿಜೆಪಿಯವರ ಕೈವಾಡವಿದೆ ಎನ್ನುವುದು ಸುಳ್ಳು ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಗರಂ ಆದ್ರು. ಇದನ್ನೂ ಓದಿ: ಬಿಎಲ್ ಸಂತೋಷ್ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ: ಬಿಎಸ್ವೈ
ಹುಬ್ಬಳ್ಳಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಹ್ಲಾದ್ ಜೋಶಿ ಸ್ಪರ್ಧಿಸಿದ್ರೆ, ಮೈತ್ರಿ ಅಬ್ಯರ್ಥಿಯಾಗಿ ವಿನಯ್ ಕುಲಕರ್ಣಿ ಕಣದಲ್ಲಿದ್ದಾರೆ.