ಮಂಗಳೂರು: ಕ್ಷೇತ್ರದ ಎಲ್ಲಾ ಪೂಜೆಯಲ್ಲಿ, ಕಾರ್ಯಕ್ರಮದಲ್ಲಿ ನಾನು ಇಲ್ಲಿ ಇರಲೇಬೇಕು. ಪೀಠಬಿಟ್ಟು ಅಲ್ಲಿಗೆ ಹೋಗುವುದು ಹೇಗೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ರಾಷ್ಟ್ರಪತಿ ರೇಸ್ನಲ್ಲಿ ಧರ್ಮಾಧಿಕಾರಿಯವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ವೀರೇಂದ್ರ ಹೆಗ್ಗಡೆಯವರನ್ನು ಸಂಪರ್ಕಿಸಿದಾಗ, ಬೇರು ಬಿಟ್ಟು ನಾವು ಮರ ಹತ್ತಲ್ಲ. ಕೇಂದ್ರದಿಂದ ಸೂಚನೆ ಬಂದರೂ ಇದು ಅಸಾಧ್ಯ. ಪೀಠವನ್ನು ಬಿಟ್ಟು ಅಲ್ಲಿ ಹೋಗುವುದು ಹೇಗೆ ಎಂದು ಅವರು ಪ್ರಶ್ನಿಸಿದರು.
ನನಗೆ ಏನು ಅಧಿಕೃತವಾಗಿ ಈ ವಿಚಾರ ಬಂದಿಲ್ಲ. ಇದು ಶೇ.100 ಸುಳ್ಳು ಸುದ್ದಿಯಾಗಿದೆ. ಟ್ವಿಟ್ಟರ್ ನಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಸುದ್ದಿಯಾಗುತ್ತಿದೆ ಎಂದರು.
ನರೇಂದ್ರ ಮೋದಿ ಪರ ಒಲವು ಇರುವ ರಾಷ್ಟ್ರೀಯ ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸುವ ಚೆನ್ನೈ ಮೂಲದ ಎಂಆರ್ ವೆಂಕಟೇಶ್ ಅವರು ರಾಷ್ಟ್ರಪತಿ ರೇಸ್ ನಲ್ಲಿ ವೀರೇಂದ್ರ ಹೆಗ್ಗಡೆಯವರು ಇದ್ದಾರೆ ಎಂದು ಹೇಳಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಗ್ಗಡೆಯವರು ರಾಷ್ಟ್ರಪತಿ ಆಗಲಿದ್ದಾರೆ ಎನ್ನುವ ಸುದ್ದಿ ಚರ್ಚೆಯಾಗುತ್ತಿತ್ತು.
Veerendra Hegde the spiritual leader as next president? Great.
— MRV (@MRVChennai) June 12, 2017