ವಿಜಯಪುರ: ನಾನು ನಂಬಿದ ನಾಯಕರಿಂದಲೇ ನನಗೆ ಅನ್ಯಾಯವಾಗಿದೆ. ಅದ್ರೆ ಇನ್ಮುಂದೆ ನಾನು ನನ್ನ ಹೆಂಡತಿ ಮಕ್ಕಳು ಸೇರಿದಂತೆ ಯಾರನ್ನೂ ನಂಬಲ್ಲ. ಅತ್ತೆ ಸತ್ತರೆ ಅಮವಾಸ್ಯೆ ನಿಲ್ಲುವುದಿಲ್ಲ ಎಂಬಂತೆ ನಾನು ಇಲ್ಲದಿದ್ದರೆ ನೀರಾವರಿ ಕಾಮಗಾರಿ ನಿಲ್ಲುವುದಿಲ್ಲ. ಸರ್ಕಾರ ತನ್ನ ಕಾರ್ಯವನ್ನು ಮುಂದುವರೆಸುತ್ತದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಇಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ವೈಯಕ್ತಿಕವಾಗಿ ನನಗೆ ಸ್ಥಾನಮಾನ ಕೇಳಲು ಹೋಗಿಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ದೆಹಲಿಗೆ ಭೇಟಿ ನೀಡಲು ಆಹ್ವಾನ ನೀಡಿದ್ರು, ಹಾಗಾಗಿಯೇ ದೆಹಲಿಗೆ ಹೋಗಿದ್ದೆ ಎಂದು ತಿಳಿಸಿದರು.
ನಾನು ಯಾವುದೇ ಸಚಿವ ಸ್ಥಾನಕ್ಕಾಗಿ ಅಥವಾ ಡಿಸಿಎಂ, ಕೆಪಿಸಿಸಿ ಗಾದೆ ಕೇಳಿಲ್ಲ. ಹೈಕಮಾಂಡ್ ದೆಹಲಿಗೆ ಬರುವಂತೆ ಸೂಚಿಸಿದರು ಹಾಗಾಗಿ ಹೋಗಿದ್ದೆ. ಈ ವೇಳೆ ನಮ್ಮ ಮನೆತನದ ಇತಿಹಾಸ, 1991 ರಿಂದ ನಾನು ಏನು ದುಡಿದಿದ್ದೇನೆ. ನೀರಾವರಿ ಕೆಲಸಗಳನ್ನು ಮಾಡಿದ್ದೇನೆ ಎಂಬವುದನ್ನು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.
ತಾವು ಪಕ್ಷ ಹಾಗೂ ರಾಜ್ಯದ ಸೇವೆಯನ್ನು ಪರಿಗಣಿಸದೆ ಯಾಕೆ ಹೀಗಾಯ್ತು ಎಂಬುವುದನ್ನು ಅವರಲ್ಲಿ ಚರ್ಚೆ ನಡೆಸಿದೆ. ಅಲ್ಲದೇ ಒಬ್ಬರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಒಂದು ನ್ಯಾಯ ಆಗಿದೆ. ನನಗೊಂದು ಮಾನದಂಡ, ಬೇರೆಯವರಿಗೆ ಒಂದು ಮಾನದಂಡ ಮಾಡಲಾಗಿದೆ. ಐದು ವರ್ಷ ಸಚಿವನಾಗಿದ್ದೇನೆ ಎಂದು ನನಗೆ ಸಚಿವ ಸ್ಥಾನ ನೀಡಿಲ್ಲ ಎನ್ನಲಾಗಿದೆ. ಹಾಗಾದರೆ ಈ ನಿಯಮವನ್ನು ಆರ್ ವಿ ದೇಶಪಾಂಡೆ, ಕೆಜೆ ಜಾರ್ಜ್, ಯು ಟಿ ಖಾದರ್ ಸೇರಿದಂತೆ ಯಾವ ನಾಯಕರಿಗೂ ಅನ್ವಯ ಆಗುವುದಿಲ್ಲವೇ? ಎಲ್ಲರಿಗೂ ಒಂದೇ ನಿಯಮ ಜಾರಿ ಮಾಡಬೇಕಿತ್ತು. ಆದರೆ ನಾನು ಯಾರಿಗೂ ಸಚಿವ ಸ್ಥಾನ ನೀಡಬೇಡಿ ಎಂದು ಹೇಳಿಲ್ಲ. ಪಕ್ಷದಲ್ಲಿ ಆಗಿರುವ ಕೆಲವು ತಪ್ಪುಗಳು ಬೇರೆ ಯಾರಿಗೂ ಆಗಬಾರದು ಎಂದು ರಾಹುಲ್ ಗಾಂಧಿ ಅವರಿಗೆ ತಿಳಿಸಿದ್ದಾಗಿ ಹೇಳಿದರು.