ನವದೆಹಲಿ: ಪಾಕಿಸ್ತಾನ ಕಪಿಮುಷ್ಟಿಯಿಂದ ಬಿಡುಗಡೆಗೊಂಡಿರುವ ಭಾರತದ ಹಮ್ಮೆಯ ವೀರಪುತ್ರ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಆರೋಗ್ಯವಾಗಿದ್ದಾರೆ.
ಶುಕ್ರವಾರ ರಾತ್ರಿ ಪಾಕ್ ಸೈನಿಕರು ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಅಭಿನಂದನ್ ಅವರು ತಮ್ಮ ಪೋಷಕರನ್ನು ಭೇಟಿಯಾಗಿದ್ದಾರೆ. ಈ ವೇಳೆ ನಾನು ಆರಾಮವಾಗಿದ್ದೇನೆ. ನನ್ನ ಆರೋಗ್ಯ ಚೆನ್ನಾಗಿದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ವೇಳೆ ಮತ್ತೆ ನಾನು ವಾಯುಸೇನೆಯ ಕರ್ತವ್ಯಕ್ಕೆ ಹಾಜರಾಗುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಮೃತಸರದಿಂದ ಇಂದು ಬೆಳಗ್ಗೆ ದೆಹಲಿಗೆ ಅಭಿನಂದನ್ ಆಗಮಿಸಿದರು. ಅವರನ್ನು ಮೊದಲು ವಾಯುಸೇನೆ ಕಚೇರಿಗೆ ಕರೆತರಲಾಯಿತು. ಬಳಿಕ ಬೇರೆ ಬೇರೆ ಹಂತಗಳಲ್ಲಿ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಸದ್ಯ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ. ಆ ವರದಿ ಬಂದ ಬಳಿಕ ಅವರು ದೈಹಿಕವಾಗಿ ಫಿಟ್ ಆಗಿದ್ದಾರೆ ಎಂಬುದನ್ನು ಅರಿತುಕೊಂಡು ವಾಯುಸೇನೆಯ ಮುಖ್ಯ ಅಧಿಕಾರಿಗಳು ಅವರ ವಿಚಾರಣೆ ನಡೆಸುತ್ತಾರೆ. ಪಾಕಿಸ್ತಾನದಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿಯನ್ನು ಕೋರುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ವೀರಪುತ್ರ ಅಭಿನಂದನ್ ಬಿಡುಗಡೆ ವಿಳಂಬವಾಗಿದ್ದೇಕೆ..?
ಪಾಕಿಸ್ತಾನದ ವಾಯುದಾಳಿಯನ್ನು ಹಿಮ್ಮೆಟ್ಟುವ ವೇಳೆ ಗಡಿ ದಾಟಿ ಪಾಕ್ ಸೈನ್ಯದ ವಶದಲ್ಲಿದ್ದ ಅಭಿನಂದನ್ ಶುಕ್ರವಾರ ಸಂಜೆ ವೇಳೆಗೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಮತ್ತೆ ತನ್ನ ಕುತಂತ್ರವನ್ನು ಪ್ರದರ್ಶಿಸಿತ್ತು. ನಿನ್ನೆ ಮುಂಜಾನೆಯಿಂದಲೇ ವಾಘಾ ಗಡಿಯಲ್ಲಿ ಕಾದು ಕುಳಿತಿದ್ದ ಭಾರತೀಯ ಅಭಿಮಾನಿಗಳ ಛಲ ರಾತ್ರಿಯಾದ್ರು ಕಡಿಮೆ ಆಗಲಿಲ್ಲ. ಸಂಜೆ ವೇಳೆಗೆ ಮಳೆ ಬಂದಿದ್ದರೂ ಕೂಡ ಲೆಕ್ಕಿಸದ ಭಾರತೀಯರು ಅಲ್ಲೇ ನಿಂತಿದ್ದರು. ಇವೆಲ್ಲದರ ನಡುವೆಯೇ ರಾತ್ರಿ 9.15 ಗಂಟೆ ವೇಳೆಗೆ ಅಭಿನಂದನ್ ಭಾರತದ ನೆಲವನ್ನು ಪ್ರವೇಶಿಸಿದ್ದರು.
ಅಭಿನಂದನ್ ಅವರನ್ನು ಸ್ವಾಗತ ಮಾಡಲು ವಾಯುಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಹಾಗೂ ಭಾರತ ಸರ್ಕಾರದ ಅಧಿಕಾರಿಗಳು ವಾಘಾ ಗಡಿಗೆ ಆಗಮಿಸಿದ್ದರು. ಅಲ್ಲದೇ ಅಭಿನಂದನ್ ಪೋಷಕರು ಕೂಡ ಸ್ಥಳದಲ್ಲಿ ಹಾಜರಿದ್ದರು. ವಾಘಾ ಗಡಿಯಿಂದ ನೇರ ಅವರನ್ನು ಅಮೃತಸರಕ್ಕೆ ಕರೆದ್ಯೊಯಲಾಯಿತು. ಆ ಬಳಿಕ ಅಲ್ಲಿಂದ ಸೇನಾಧಿಕಾರಿಗಳೊಂದಿಗೆ ದೆಹಲಿಗೆ ವಿಮಾನದಲ್ಲಿ ಕರೆತಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv