ನವದೆಹಲಿ: ಸಂಸದೆಯಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುವ ನಟಿ ನುಸ್ರತ್ ಜಹಾನ್ ಅವರು ಇದೀಗ ನಾನು ದೇವರ ವಿಶೇಷ ಮಗು ಎಂದು ಹೇಳಿದ್ದಾರೆ.
ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ‘ಸಿಂಧೂರ್ ಖೇಲಾ’ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದೆ, ನಾನು ದೇವರ ವಿಶೇಷ ಮಗು ಎಂದು ಹೇಳಿದ್ದಾರೆ. ಇದೇ ವೇಳೆ ಮಾನವೀಯತೆ ಬಗ್ಗೆ ಮಾತನಾಡಿದ ಅವರು, ನಾನು ಮಾನವೀಯತೆಯನ್ನು ಹೆಚ್ಚಾಗಿ ಗೌರವಿಸುತ್ತೇನೆ. ಎಲ್ಲದಕ್ಕಿಂತಲೂ ಹೆಚ್ಚು ನಾನು ಅದನ್ನು ಪ್ರೀತಿಸುತ್ತೇನೆ. ವಿವಾದಗಳಿಗೆ ನಾನು ತಲೆಕೆಡಿಸಿಕೊಳ್ಳಲ್ಲ. ಅದರಿಂದ ನನಗೆ ಯಾವುದೇ ಪರಿಣಾಮ ಬೀರಲ್ಲ ಎಂದು ತಿಳಿಸಿದ್ದಾರೆ.
ದೇವರ ಮಗಳಾಗಿರುವ ನಾನು ಯಾವುದೇ ಮುಜುಗರವಿಲ್ಲದೆ ಎಲ್ಲಾ ಹಬ್ಬಗಳನ್ನು ಆಚರಿಸುತ್ತೇನೆ. ಇದರಿಂದ ನಾನು ತುಂಬಾ ಸಂತೋಷವಾಗುತ್ತೇನೆ. ಏನೇ ವಿವಾದಗಳು ಆಗಲಿ, ನಾನು ಯಾವುದನ್ನೂ ಕೇರ್ ಮಾಡಲ್ಲ ಎಂದು ಅವರು ಹೇಳಿದ್ದಾರೆ.
ಬಂಗಾಳಿ ಮಹಿಳೆಯರು ವಿಜಯದಶಮಿ ದಿನದಂದು ‘ಸಿಂಧೂರ್ ಖೇಲಾ’ವನ್ನು ಆಚರಣೆ ಮಾಡುತ್ತಾರೆ. ಕೊನೆಯ ದಿನವಾದ ದುರ್ಗಾ ಪೂಜೆಯಂದು ಮಹಿಳೆಯರು ಪರಸ್ಪರ ಸಿಂಧೂರವನ್ನು ಹಚ್ಚಿ, ಸಿಹಿ ತಿನ್ನಿಸುವ ಸಂಪ್ರದಾಯವಿದೆ. ಈ ಕಾರ್ಯಕ್ರಮಕ್ಕೆ ಸಂಸದೆಯ ಜೊತೆ ಆಕೆಯ ಪತಿ ನಿಖಿಲ್ ಜೈನ್ ಕೂಡ ಭಾಗವಹಿಸಿ, ಅದ್ಧೂರಿಯಾಗಿ ಹಬ್ಬ ಆಚರಣೆ ಮಾಡಿದ್ದಾರೆ.
ಇತ್ತೀಗಷ್ಟೇ ನುಸ್ರತ್ ತಮ್ಮ ಪತಿ ಜೊತೆ ದುರ್ಗಾ ಪೂಜೆ ಕೂಡ ನೆರವೇರಿಸಿ ಸಾಕಷ್ಟು ಚರ್ಚೆಗೆ ಗ್ರಾಸರಾಗಿದ್ದರು. ದುರ್ಗಾ ಪೂಜೆ ಮಾಡಿದ್ದಕ್ಕೆ ಇಸ್ಲಾಂ ಧರ್ಮ ಗುರು ಕಿಡಿಕಾರಿದ್ದರು. ಆದರೆ ಸಂಸದೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಸಖತ್ ತಿರುಗೇಟು ಕೂಡ ನೀಡಿದ್ದರು.
ಅಲ್ಲಾಹು ಹೊರತುಪಡಿಸಿ ಇತರೆ ದೇವರುಗಳನ್ನು ಪೂಜಿಸಲು ಇಸ್ಲಾಂ ಧರ್ಮದಲ್ಲಿ ಅನುಮತಿ ನೀಡಿಲ್ಲ. ಆದರೆ, ನುಸ್ರತ್ ದುರ್ಗಾ ಪೂಜೆಯನ್ನು ನೆರವೇರಿಸಿದ್ದಾರೆ. ಇದು ಸಂಪೂರ್ಣವಾಗಿ ಇಸ್ಲಾಂ ವಿರೋಧಿಯಾಗಿದೆ. ಅವರು ಇಸ್ಲಾಂ ಅನ್ನು ಅನುಸರಿಸುತ್ತಿಲ್ಲ. ಇದಲ್ಲದೆ ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಹೀಗಾಗಿ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿ, ಅದನ್ನು ಬಿಟ್ಟು ಇಸ್ಲಾಂಗೆ ಅಪಮಾನ ಮಾಡುವುದು ಸರಿಯೇ ಎಂದು ಮುಫ್ತಿ ಅಸಾದ್ ಕಾಸ್ಮಿ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ನುಸ್ರತ್, ಎಲ್ಲ ಧರ್ಮದ ಸೌಹಾರ್ದತೆ ಸಾರಲು ನನ್ನದೇ ಆದ ದಾರಿಯಲ್ಲಿ ನಾನು ಹೋಗುತ್ತಿದ್ದೇನೆ. ನಾನು ಮಾಡುತ್ತಿರುವ ಸರಿಯೆಂದು ನನಗೆ ಅನಿಸುತ್ತಿದೆ. ನಾವು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸಬೇಕು. ಅವರು ನನಗೆ ಹೆಸರು ಇಟ್ಟಿಲ್ಲ. ಹೀಗಾಗಿ ನಿನ್ನ ಹೆಸರನ್ನು ಬದಲಿಸಿಕೋ ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದು ಮಾತಿನ ಚಾಟಿ ಬೀಸಿದ್ದರು.
#WATCH Kolkata: Trinamool Congress MP Nusrat Jahan dances as husband Nikhil Jain plays the 'dhak' at Suruchi Sangha. #DurgaPuja2019 pic.twitter.com/QIZWJSmx30
— ANI (@ANI) October 6, 2019