-ಪ್ರತಿಪಕ್ಷದವರು ಎಲ್ಲದರಲ್ಲಿಯೂ ರಾಜಕಾರಣ ಮಾಡ್ತಾರೆ
ಬೆಂಗಳೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸಮಸ್ಯೆ ಇಲ್ಲ. ಎಲ್ಪಿಜಿ ಗಲ್ಫ್ ದೇಶಗಳಿಂದ ಬರುವುದು ನಿಂತಿದೆ. ನನ್ನ ಪ್ರಕಾರ ಅದು ಕೂಡ ಆದಷ್ಟು ಬೇಗ ಆರಂಭವಾಗಲಿದೆ. ಮುಂದಿನ ಒಂದು ವಾರದಲ್ಲಿ ಬಹುತೇಕ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯಪಟ್ಟರು.
ದೆಹಲಿಯಲ್ಲಿ ಖಾಸಗಿ ಸುದ್ದಿ ಸಂಸ್ಥೆಗೆ ಮಾತನಾಡಿದ ಅವರು, ದೇಶದಲ್ಲಿ ಆಂತರಿಕ ಉತ್ಪಾದನೆ ಹೆಚ್ಚಳ ಮಾಡಬೇಕಾಗುತ್ತದೆ. ಲಾಜಿಸ್ಟಿಕ್ಸ್ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ರ್ಕಾರ ನಿರಂತರ ಕೆಲಸ ಮಾಡುತ್ತಿದೆ. ಹೀಗಾಗಿ ಇರಾನಿನಲ್ಲಿ ನಮ್ಮ ದೇಶದ ಮೂರು ಹಡಗುಗಳಿಗೆ ಅವಕಾಶ ಕಲ್ಪಿಸಿದೆ. ಇದು ಮೋದಿ ರ್ಕಾರದ ಸಕಾರಾತ್ಮಕ ಪರಿಣಾಮವಾಗಿದೆ. ಆ ಕಾರಣದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಈಗ ಎಲ್ಪಿಜಿ ಸಮಸ್ಯೆ ಇದೆ. ಆ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ – ದಂಪತಿಗೆ ಗಂಭೀರ ಗಾಯ
ಪ್ರತಿಪಕ್ಷದವರು ದೇಶದ ಯಾವುದೇ ಭಾಗದಲ್ಲಿ ಏನೇ ನಡೆದರೂ, ಎಲ್ಲಿ ನಾಯಿ ಕಚ್ಚಿದರೂ ಅದಕ್ಕೆ ಮೋದಿಯವರನ್ನು ಲಿಂಕ್ ಮಾಡುತ್ತಾರೆ. ಅವರ ಪರಿಸ್ಥಿತಿ ಅಷ್ಟು ಕೆಟ್ಟಿದೆ. ದೇಶದ ಬಗ್ಗೆ ಅವರು ಯಾವತ್ತೂ ಯೋಚನೆ ಮಾಡಿಲ್ಲ. ಇಡೀ ಜಗತ್ತು, ದೇಶ ಚಿಂತೆಯಲ್ಲಿದೆ. ಬೇರೆ ದೇಶಗಳಲ್ಲಿ ಏನಾಗುತ್ತಿದೆ ಎನ್ನುವುದನ್ನು ಅವರು ನೋಡಬೇಕು. ನಮ್ಮ ದೇಶದಲ್ಲಿ ಬೇರೆ ದೇಶಗಳಿಗಿಂತ ಉತ್ತಮ ಪರಿಸ್ಥಿತಿ ಇದೆ. ಅವರಿಗೆ ಎಲ್ಲದರಲ್ಲೂ ರಾಜಕಾರಣ ಮಾಡಬೇಕಿದೆ. ದೇಶದ ಅಭಿವೃದ್ದಿಯಲ್ಲಿ, ಸಂಕಷ್ಟದಲ್ಲಿಯೂ ರಾಜಕಾರಣ ಮಾಡಲು ಬಯಸುತ್ತಾರೆ ಎಂದು ಆರೋಪಿಸಿದರು.

