ಹೈದರಾಬಾದ್: ಮಹಿಳೆಯೊಬ್ಬರು ಮಳೆಯ ನಡುವೆ ರಾತ್ರಿಯಿಡೀ ನಡುರಸ್ತೆಯಲ್ಲಿ ತನ್ನ ಮಗನ ಮೃತದೇಹವನ್ನು ಕಾವಲು ಕಾದ ಮನಕಲಕುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ತೆಲಂಗಾಣ ರಾಜ್ಯ ರಾಜಧಾನಿಯಾದ ಹೈದರಾಬಾದ್ನ ಕುಕ್ಕಟ್ಪಲ್ಲಿ ಪ್ರದೇಶದ ವೆಂಕಟೇಶ್ವರ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ನಾಲ್ಕು ವರ್ಷಗಳ ಹಿಂದೆ ಮೆಹಬೂಬ್ನಗರ ಜಿಲ್ಲೆಯಿಂದ ತನ್ನ ಎರಡು ಮಕ್ಕಳೊಂದಿಗೆ ಇಲ್ಲಿಗೆ ಬಂದ ಈಶ್ವರಮ್ಮ, ವೆಂಕಟೇಶ್ವರ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಈಶ್ವರಮ್ಮ ಅವರ ಕಿರಿಯ ಮಗ ಸುರೇಶ್ ಡೆಂಗ್ಯೂ ಜ್ವರದಿಂದ ತೀವ್ರವಾಗಿ ಬಳಲಿ ಬುಧುವಾರ ಸಂಜೆ ಮೃತಪಟ್ಟಿದ್ದ. ಈತನ ಮೃತದೇಹವನ್ನು ಅಂದು ಸಂಜೆ ಆತನ ಕುಟುಂಬಸ್ಥರು ತಾವು ವಾಸವಿದ್ದ ಬಾಡಿಗೆ ಮನೆಗೆ ತಂದಿದ್ದಾರೆ. ಆದರೆ ಮನೆಯ ಮಾಲೀಕ ಮೃತ ದೇಹವನ್ನು ಮನೆಯ ಒಳಗೆ ತೆಗೆದುಕೊಂಡು ಹೋಗಲು ಅನುಮತಿಯನ್ನು ನೀಡದೆ ಮನೆಯಿಂದ ಹೊರಹಾಕಿದ್ದಾನೆ. ಶವವನ್ನು ಒಳಗೆ ತೆಗೆದುಕೊಂಡು ಹೋದರೆ ತನ್ನ ಕುಟುಂಬಕ್ಕೆ ಕೆಟ್ಟದ್ದಾಗುತ್ತದೆ ಎಂದು ಮಾಲೀಕ ಜಗದೀಶ್ ಗುಪ್ತಾ ಹೇಳಿದ್ದಾನೆ.
ಸುರೇಶ್ ತಾಯಿ ಈಶ್ವರಪ್ಪ ಇಲ್ಲಿಮ ರೂಮ್ವೊಂದರಲ್ಲಿ ವಾಸವಿದ್ದು, ಉಳಿದಂತೆ ಗುಪ್ತಾ ಹಾಗೂ ಅವರ ಸಂಬಂಧಿಕರೇ ಇಲ್ಲಿ ವಾಸ ಮಾಡುತ್ತಿದ್ದಾರೆ. ಬಾಲಕ ಡೆಂಗ್ಯೂ ಜ್ವರದಿಂದ ಬಳಲಿ ಮೃತಪಟ್ಟಿದ್ದರಿಂದ ಅದರಿಂದ ಇನ್ಫೆಕ್ಷನ್ ಆಗಬಹುದೆಂದು ಗುಪ್ತಾ ಹೇಳಿದ್ದಾನೆ.
ಹೀಗಾಗಿ ಇಡೀ ರಾತ್ರಿ ಈಶ್ವರಮ್ಮ ಮನೆಯ ಹೊರಗೆ ಮೃತದೇಹದ ಜೊತೆ ಕಾಲ ಕಳೆಯುವಂತಾಗಿದೆ. ಈ ವೇಳೆ ಅಕ್ಕಪಕ್ಕದ ಮನೆಯವರೂ ಕೂಡ ಇದನ್ನ ಪ್ರಶ್ನಿಸಿಲ್ಲ.
ಮರುದಿನ ಮುಂಜಾನೆ ವಾಕಿಂಗ್ ಮಾಡುತ್ತಿದ್ದವರು ಈಶ್ವರಮ್ಮ ಹಾಗೂ ಅವರ ಹಿರಿಯ ಮಗ ಮೃತದೇಹವನ್ನು ಹಿಡಿದು ಕುಳಿತಿದ್ದನ್ನು ನೋಡಿದ್ದಾರೆ. ನಂತರ ಸಾಕಷ್ಟು ಜನ ಗುಂಪು ಸೇರಿದ್ದಾರೆ. ಬಳಿಕ ಒಂದು ಪೆಟ್ಟಿಗೆಯನ್ನ ತರಿಸಿಮೃತದೇಹವನ್ನ ಅದರಲಿ ಇರಿಸಿದ್ದಾರೆ. ಕೆಲವರು ಅಂತ್ಯಸಂಸ್ಕಾರ್ಕಕಾಗಿ ಹಣ ಸಂಗ್ರಹಿಸಿ ಸಹಾಯ ಮಾಡಿದ್ದಾರೆ.
ಮನೆಯ ಮಾಲೀಕನ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿರುವ ಸ್ಥಳಿಯರು, ಯಾರ ಮನೆಯಲ್ಲಿ ತಾನೆ ಸಾವು ಸಂಭವಿಸಿಲ್ಲ? ಅಥವಾ ಮುಂದೆ ಸಂಭವಿಸುವುದಿಲ್ವಾ ಎಂದು ಪ್ರಶ್ನಿಸಿದ್ದಾರೆ.