ಹೆಂಡ್ತಿಗೆ ಎಂಬಿಬಿಎಸ್ ಸೀಟ್ ಸಿಗ್ಲಿಲ್ಲವೆಂದು ಬೆಂಕಿ ಹಚ್ಚಿ ಕೊಂದ್ನಾ ಟೆಕ್ಕಿ?

Public TV
1 Min Read
hyderabad

ಹೈದರಾಬಾದ್: ಎಂಬಿಬಿಎಸ್ ವ್ಯಾಸಂಗಕ್ಕೆ ಪ್ರವೇಶಾತಿ ಪಡೆಯಲು ವಿಫಲಳಾದ ಹೆಂಡತಿಯನ್ನು ಸಾಫ್ಟ್ ವೇರ್ ಎಂಜಿನಿಯರ್ ಪತಿಯೊಬ್ಬ ಬೆಂಕಿ ಹಚ್ಚಿ ಕೊಲೆ ಮಾಡಿರುವುದಾಗಿ ಹೈದರಾಬಾದ್ ಪೊಲೀಸರು ಶಂಕಿಸಿದ್ದಾರೆ. ಮೃತ ಮಹಿಳೆಯ ಪತಿ ಹಾಗೂ ಆತನ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.

25 ವರ್ಷದ ಹಾರಿಕಾ ಕುಮರ್ ಮೃತ ದುರ್ದೈವಿ. ಹೈದರಾಬಾದ್‍ನ ಎಲ್‍ಬಿ ನಗರದ ರಾಕ್ ಟೌನ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಹಾರಿಕಾ ಪೋಷಕರು ಮಗಳನ್ನ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದು, ವರದಕ್ಷಿಣೆ ಕಿರುಕುಳದ ಬಗ್ಗೆಯೂ ಪ್ರಕರಣ ದಾಖಲಿಸಿದ್ದಾರೆ.

ಹಾರಿಕಾ ಪತಿ ಋಷಿ ಕುಮಾರ್ ಭಾನುವಾರ ರಾತ್ರಿ ಹಾರಿಕಾ ತಾಯಿಗೆ ಕರೆ ಮಾಡಿ, ನಿಮ್ಮ ಮಗಳು ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಾರಿಕಾ ಆತ್ಮಹತ್ಯೆ ಮಾಡಿಕೊಂಡಳೆಂದು ಪತಿ ಋಷಿ ಹೇಳುತ್ತಿದ್ದಾನೆ. ಆದ್ರೆ ನಾವು ಸ್ಥಳಕ್ಕೆ ಹೋಗಿ ನೋಡಿದ ನಂತರ ಇದೊಂದು ಕೊಲೆಯಂತೆ ಕಾಣುತ್ತಿದೆ. ಋಷಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದು ಎಸಿಪಿ ವೇಣುಗೋಪಾಲ್ ರಾವ್ ಹೇಳಿದ್ದಾರೆ.

ಹಾರಿಕಾ ಕೆಲವು ಸಮಯದಿಂದ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯನ್ನ ತೆಗೆದುಕೊಂಡಿದ್ದಳು. ಆದ್ರೆ ಈ ವರ್ಷವೂ ಆಕೆ ತೇರ್ಗಡೆಯಾಗಿರಲಿಲ್ಲ. ಖಾಸಗಿ ಕಾಲೇಜೊಂದರಲ್ಲಿ ಡೆಂಟಲ್ ಸರ್ಜರಿ ಪದವಿಗೆ ಆಯ್ಕೆಯಾಗಿದ್ದಳು. ಆದ್ರೆ ಪತಿ ಋಷಿಗೆ ಇದರಿಂದ ತೃಪ್ತಿಯಿರಲಿಲ್ಲ. ಆಕೆಗೆ ಡಿವೋರ್ಸ್ ಕೊಡುವುದಾಗಿ ಬೆದರಿಕೆ ಹಾಕಿದ್ದ ಎಂದು ಹಾರಿಕಾ ಪೋಷಕರು ಆರೋಪ ಮಾಡಿದ್ದಾರೆ.

ಹಾರಿಕಾ ಮತ್ತು ಋಷಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ವರದಕ್ಷಿಣೆಗಾಗಿಯೂ ಕಿರುಕುಳ ನೀಡುತ್ತಿದ್ದ. ಪ್ಲಾನ್ ಮಾಡಿ ಈ ಕೊಲೆ ಮಾಡಿದ್ದಾರೆ ಎಂದು ಹಾರಿಕಾ ತಾಯಿ ಹಾಗೂ ಸಹೋದರಿ ಹೇಳಿದ್ದಾರೆ.

ಮಹಿಳೆಯನ್ನ ಮೊದಲು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಆಕೆಯ ದೇಹವನ್ನು ಸುಟ್ಟುಹಾಕಲಾಗಿದ್ಯಾ ಎಂಬ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿಯಲಿದೆ. ಸದ್ಯ ವರದಿಗಾಗಿ ಕಾಯುತ್ತಿದ್ದೇವೆ. ತನಿಖೆ ಮುಂದುವರೆಸಿದ್ದೇವೆ ಎಂದು ಪೊಲಿಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *