ಹೈದರಾಬಾದ್: ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಕಾಮುಕರನ್ನು ಪೊಲೀಸರು ಎನ್ಕೌಂಟರ್ ಮಾಡಿ ಹುಟ್ಟಡಗಿಸಿದ ಬೆನ್ನಲ್ಲೇ ತೆಲಂಗಾಣ ಪೊಲೀಸರಿಗೆ ಬೇಡಿಕೆ ಹೆಚ್ಚಾಗಿದೆ. ಅತ್ಯಾಚಾರಿಗಳಿಗೆ ಶಿಕ್ಷೆ ನೀಡಲು ಹೀಗೆ ಮತ್ತಷ್ಟು ಎನ್ಕೌಂಟರ್ಗಳನ್ನು ಮಾಡಿ ಎಂದು ಪೊಲೀಸರ ಮುಂದೆ ತೆಲಂಗಾಣದ ಜನರು ಬೇಡಿಕೆ ಇಟ್ಟಿದ್ದಾರೆ.
ದಿಶಾ ಪ್ರಕರಣದಲ್ಲಿ ಸೈಬರಾಬಾದ್ ಪೊಲೀಸರು ಕೈಗೊಂಡ ಕ್ರಮಕ್ಕೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದ್ದು, ತೆಲಂಗಾಣದಲ್ಲಿ ಇತ್ತೀಚೆಗೆ ಘಟಿಸಿದ್ದ ಇನ್ನೂ ಮೂರು ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಲು ಪೊಲೀಸರು ಮುಂದಾಗಬೇಕು. ಈ ಮೂಲಕ ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹೈದ್ರಾಬಾದ್ ರೇಪಿಸ್ಟ್ಗಳನ್ನು ಎನ್ಕೌಂಟರ್ ಮಾಡಿದಂತೆ ಆರೋಪಿಗಳಿಗೆ ಶಿಕ್ಷೆಯಾಗಲಿ: ಉನ್ನಾವೋ ಸಂತ್ರಸ್ತೆಯ ತಂದೆ
ವಾರಂಗಲ್ ಜಿಲ್ಲೆಯ ಹನಮಕೊಂಡ ಗ್ರಾಮದಲ್ಲಿನ ಯುವತಿ, ಯಾದಾದ್ರಿ ಜಿಲ್ಲೆಯ ಹಾಜಿಪುರದ ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಕುಮುರಾಮ್ ಭೀಮ್ ಜಿಲ್ಲೆಯ ಅಸಿಫಾಬಾದ್ನಲ್ಲಿ ನಡೆದ ದಲಿತ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಈ ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾಮಾಂಧರನ್ನು ಪೊಲೀಸರು ಎನ್ಕೌಂಟರ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಇದನ್ನೂ ಓದಿ: ಕಾಮುಕರಿಗೆ ಗುಂಡೇಟು – ಇಂದು ಬೆಳಗ್ಗೆ ಎನ್ಕೌಂಟರ್ ನಡೆದಿದ್ದು ಹೇಗೆ?
ಈ ಮೇಲಿನ ಮೂರು ಪ್ರಕರಣಗಳ ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ದಿಶಾ ಪ್ರಕರಣದಂತೆ ಈ ಮೂರು ಪ್ರಕರಣದ ಆರೋಪಿಗಳ ಮೇಲೂ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆದರೆ ಪೊಲೀಸರು ಸಂತ್ರಸ್ತೆಯರ ಆರ್ಥಿಕ ಪರಿಸ್ಥಿತಿ ಹಾಗೂ ಜಾತಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿದೆ. ದಯವಿಟ್ಟು ಪೊಲೀಸರು ಯಾವುದೇ ಭೇದಭಾವ ತೋರದೆ ಈ ಮೂರು ಪ್ರಕರಣದ ಆರೋಪಿಗಳನ್ನು ಗುಂಡಿಟ್ಟು ಹತ್ಯೆ ಮಾಡಿ ಎಂದು ಜನರು ಆಗ್ರಹಿಸಿದ್ದಾರೆ.