ಹೈದರಾಬಾದ್: ಸ್ವಾತಂತ್ರ್ಯ ದಿನಾಚರಣೆಯಂದು ಬೆಸ್ಟ್ ಕಾನ್ಸ್ಟೇಬಲ್ ಪ್ರಶಸ್ತಿ ಪಡೆದ ಪೇದೆಯೊಬ್ಬರು, ಪ್ರಶಸ್ತಿ ಪಡೆದ 24 ಗಂಟೆಯಲ್ಲಿ ಲಂಚ ಪಡೆದು ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಮಹಬೂಬ್ನಗರದ ಐ-ಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಲ್ಲೆ ತಿರುಪತಿ ರೆಡ್ಡಿ ಲಂಚ ಪಡೆದ ಪೇದೆ. ಇವರಿಗೆ ಸ್ವಾತಂತ್ರ್ಯ ದಿನದಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೆಮಾ ರಾಜೇಶ್ವರಿ ಅವರ ಸಮ್ಮುಖದಲ್ಲಿ ಅಬಕಾರಿ ಸಚಿವ ವಿ.ಶ್ರೀನಿವಾಸ್ ಗೌಡ ಅವರಿಂದ ಬೆಸ್ಟ್ ಕಾನ್ಸ್ಟೇಬಲ್ ಎಂಬ ಗೌರವ ಮತ್ತು ಪ್ರಶಸ್ತಿಯನ್ನು ಪಡೆದಿದ್ದರು.
ಪ್ರಶಸ್ತಿ ಪಡೆದ ಒಂದು ದಿನದೊಳಗೆ ಪೊಲೀಸ್ ಅಧಿಕಾರಿ ಮತ್ತೆ ಲಂಚ ಪಡೆದು ಸುದ್ದಿಯಾಗಿದ್ದಾರೆ. ತಿರುಪತಿ ರೆಡ್ಡಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸದೆ ಇರಲು 17,000 ಹಣವನ್ನು ಲಂಚವಾಗಿ ಪಡೆದ ಆರೋಪದ ಮೇಲೆ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಗದು ಸಮೇತ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.
ರಮೇಶ್ ಎಂಬವರು ತಿರುಪತಿ ರೆಡ್ಡಿ ಅವರು ಸರಿಯಾದ ದಾಖಲೆಗಳನ್ನು ಹೊಂದಿದ್ದರೂ ಮರಳು ಸಾಗಿಸುವಾಗ ಲಂಚ ನೀಡುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆಂದು ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕೆಲಸ ಆರಂಭಿಸಿದ ಎಸಿಬಿ ಅಧಿಕಾರಿಗಳ ಬಲೆಗೆ ರೆಡ್ಡಿ ಬಿದ್ದಿದ್ದಾರೆ. ನಗದು ಸಮೇತ ಪೇದೆಯನ್ನು ಬಂಧಿಸಿದ ನಂತರ, ರೆಡ್ಡಿ ಅವರನ್ನು ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕಳೆದ ತಿಂಗಳು ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳು ಎರಡು ವರ್ಷಗಳ ಹಿಂದೆ ರಾಜ್ಯದ ‘ಅತ್ಯುತ್ತಮ ತಹಶೀಲ್ದಾರ್’ ಎಂದು ಪ್ರಶಸ್ತಿ ಪಡೆದಿದ್ದ, ಕಂದಾಯ ಅಧಿಕಾರಿಯ ಮನೆಯಿಂದ 93.5 ಲಕ್ಷ ನಗದು ಮತ್ತು 400 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು.