ಹೈದರಾಬಾದ್: ಕರ್ನಾಟಕದ ರಿಯಲ್ ಸಿಂಗಂ, ಭ್ರಷ್ಟ ರಾಜಕಾರಣಿಗಳನ್ನೇ ಜೈಲಿಗಟ್ಟಿ ಅಬ್ಬರಿಸಿ ಲೋಕಾಯುಕ್ತಕ್ಕೆ ಹೊಸ ಖದರ್ ತಂದು ಕೊಟ್ಟಿದ್ದ ಯುವ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ಇಷ್ಟದ ಹಾಡು ಹಾಡುವ ಮೂಲಕ ಸಹೋದ್ಯೋಗಿಗಳು ಗೀತ ನಮನ ಸಲ್ಲಿಸಿದ್ದಾರೆ.
ಹೈದರಾಬಾದ್ ನಲ್ಲಿ ಇಂದು ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಹೀಗಾಗಿ ಅಂತಿಮ ದರ್ಶನ ಪಡೆಯುತ್ತಿದ್ದ ಸಂದರ್ಭದಲ್ಲಿ ಸಹೋದ್ಯೋಗಿ ಪವನ್ ಕುಮಾರ್ ಅವರು ಮಧುಕರ್ ಅವರ ಇಷ್ಟವಾದ ಹಿಂದಿ ಹಾಡೊಂದನ್ನು ಹಾಡಿ ಕಣ್ಣೀರಿನ ವಿದಾಯ ತಿಳಿಸಿದ್ದಾರೆ. ಬಿಕ್ಕಿ ಬಿಕ್ಕಿ ಅಳುತ್ತಾ ಹೇಳುತ್ತಿದ್ದ ಪವನ್ ಹಾಡಿಗೆ ಅಂತಿಮ ದರ್ಶನ ಪಡೆಯಲು ಬಂದಿದ್ದ ಜನಸಾಗರವೇ ದುಃಖದ ಕಡಲಲ್ಲಿ ಮುಳುಗಿತ್ತು. ಪವನ್ ಕುಮಾರ್ ಅವರು 2009ರ ಬ್ಯಾಚ್ ಮೇಟ್ ಆಗಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಐಪಿಎಸ್ ಮಧುಕರ್ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ 8.15ರ ಸುಮಾರಿಗೆ ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ರಾತ್ರಿ 8 ಗಂಟೆಯವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ನಾಳೆ ಅವರ ಹುಟ್ಟೂರು ಉಡುಪಿ ಜಿಲ್ಲೆಯ ಯಡಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ
ಖ್ಯಾತ ಪತ್ರಕರ್ತರಾಗಿದ್ದ ಉಡುಪಿ ಜಿಲ್ಲೆಯ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಪುತ್ರ ಮಧುಕರ್ಗೆ ಕೇವಲ 47 ವರ್ಷ ವಯಸ್ಸಾಗಿತ್ತು. ಇವರು 1999ರ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದರು. ಭಾರತೀಯ ಕಂದಾಯ ಸೇವೆ ಅಧಿಕಾರಿಯಾಗೋ ಅವಕಾಶ ಸಿಕ್ಕರೂ ತಾನು ಪೊಲೀಸ್ ಅಧಿಕಾರಿಯೇ ಆಗಬೇಕೆಂದು ಹಠಹಿಡಿದು ಖಾಕಿ ಧರಿಸಿ ಆ ಸೇವೆಗಾಗಿಯೇ ತಮ್ಮ ಜೀವನವನ್ನ ಮುಡಿಪಾಗಿಟ್ಟಿದ್ದರು. ಮಧುಕರ್ ಶೆಟ್ಟಿ ಒಬ್ಬಳು ಪುತ್ರಿ ಮತ್ತು ಪತ್ನಿಯನ್ನ ಅಗಲಿದ್ದಾರೆ. ಕರ್ನಾಟಕದಿಂದ ಕೇಂದ್ರ ಸೇವೆಗೆ ಮರಳಿದ್ದ ಅವರನ್ನ ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದರು. ಇದನ್ನೂ ಓದಿ: ಕರುನಾಡ ಸಿಂಗಂ ಸಾವಿನ ಬಗ್ಗೆ ಸಚಿವ ಡಿಕೆಶಿಗೆ ಸಂಶಯ..!
https://www.youtube.com/watch?v=umjUL4BMlBc
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv