ಹೈದರಾಬಾದ್: ಮುಲುಗು ಕ್ಷೇತ್ರದ ಎಂಎಲ್ಎ ದನ್ಸಾರಿ ಅನುಸುಯಾ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ವಾರಂಗಲ್ ಜಿಲ್ಲೆಯ ಜೆಡಿವಾಲು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು. ತಂದೆ ಅರುಣ್ ಮತ್ತು ತಾಯಿ ವಿಜಯ ಜೊತೆ ಬೈಕಿನಲ್ಲಿ ಅಂಗನವಾಡಿಗೆ ಹೋಗುತ್ತಿದ್ದ ಶ್ರಾವಂತಿ (3) ಮೃತಪಟ್ಟ ಕಂದಮ್ಮ. ಅಪಘಾತದಲ್ಲಿ ಬೈಕ್ ಸಂಪೂರ್ಣ ನಜ್ಜುಗಿದ್ದು ಮಗುವಿನ ಪೋಷಕರು ಗಾಯಗೊಂಡಿದ್ದಾರೆ.
ಮುಲುಗು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗತಿಕೊಯಗುಡೆನ್ ಊರಿಗೆ ಸೇರಿದ ಈ ದಂಪತಿ ತಮ್ಮ ಮಗಳು ಶ್ರಾವಂತಿಯನ್ನು ಅಂಗನವಾಡಿಗೆ ಬಿಟ್ಟು ಬರಲು ಬೈಕಿನಲ್ಲಿ ಬರುತ್ತಿದ್ದರು. ಇದೇ ವೇಳೆಗೆ ಅ ದಾರಿಯಲ್ಲಿ ಎಂಎಲ್ಎ ದನ್ಸಾರಿ ಅನುಸುಯಾ ಅವರು ಹೋಗುತ್ತಿದ್ದರು. ಎದುರಿಗೆ ಬಂದ ಬೈಕಿಗೆ ಎಂಎಲ್ಎ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಶ್ರಾವಂತಿ ತಲೆಗೆ ಬಲವಾದ ಪೆಟ್ಟಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಈ ಘಟನೆಯ ಬಗ್ಗೆ ಸಂತಾಪ ಸೂಚಿಸಿರುವ ದನ್ಸಾರಿ ಅನುಸುಯಾ ಅವರು, ಕುಟುಂಬಕ್ಕೆ ಅರ್ಥಿಕವಾಗಿ ಇಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ನನಗೆ ಈ ಅಪಘಾತದಲ್ಲಿ 3 ವರ್ಷದ ಮಗು ಸಾವನ್ನಪ್ಪಿರುವುದು ತುಂಬ ನೋವಾಗಿದೆ. ಈ ಮಗುವಿನ ಕುಟುಂಬ ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರಮಿಸಿತ್ತು. ನಮ್ಮ ಕಡೆಯಿಂದ ತಪ್ಪಾಗಿದೆ ನಾನು ಈ ದುಃಖದ ಸಮಯದಲ್ಲಿ ಈ ಕುಟುಂಬದ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾರೆ.