ಮಂಗಳೂರು: ಮಹಿಳೆಯರೂ ರಾಜಕೀಯ ಕ್ಷೇತ್ರಕ್ಕೆ ಬರಬೇಕೆಂದು ಸರ್ಕಾರ ಮೀಸಲಾತಿ ಕಲ್ಪಿಸಿದೆ. ಆದರೆ, ಮೀಸಲಿನ ಲಾಭ ಬೇಕು, ತಮ್ಮ ಮಹಿಳೆಯರನ್ನು ಸಮಾಜ ನೋಡಬಾರದೆಂಬ ಮೂಲಭೂತವಾದ ರಾಜಕೀಯ ಪಕ್ಷಗಳಲ್ಲಿಯೂ ನುಸುಳಿದೆ.
ಹೌದು. ಎಸ್ ಡಿಪಿಐ ಪಕ್ಷ ಮಂಗಳೂರಿನ ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿದೆ. ಜೊತೆಗೆ ಮಹಿಳೆಯರಿಗೆ ಮೀಸಲಾದ ಸ್ಥಾನಗಳಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಾರ್ಡ್ ನಂಬರ್ 1, 2, 11, 12ರಲ್ಲಿ ಕ್ರಮವಾಗಿ ರುಕಿಯಾ ಇಕ್ಬಾಲ್, ಶಹನಾಜ್ ಅಕ್ರಮ್ ಹಸನ್, ಖಮರುನ್ನೀಸಾ ನಜೀಮ್ ಹಾಗೂ ಜಾರೀನಾ ಬಾನು ಎಂಬವರನ್ನು ಕಣಕ್ಕಿಳಿಸಿದ್ದರೂ, ಮತಪತ್ರದಲ್ಲಿ ಮಾತ್ರ ಈ ಮಹಿಳೆಯರ ಗಂಡಂದಿರ ಫೋಟೋಗಳನ್ನು ಹಾಕಲಾಗಿದೆ.
ಒಂದು ರೀತಿಯಲ್ಲಿ ಮೀಸಲು ಹೆಸರಲ್ಲಿ ರಾಜಕೀಯ ಪಕ್ಷದಿಂದ ಗಂಭೀರ ಪ್ರಮಾದ ಆಗಿದ್ದರೆ, ಮತ್ತೊಂದ್ಕಡೆ ತಮ್ಮ ಮೂಲಭೂತವಾದವನ್ನು ರಾಜಕೀಯ ಕ್ಷೇತ್ರಕ್ಕೂ ಹೇರಿದಂತಾಗಿದೆ. ಮೀಸಲಾತಿ ಲಾಭ ಬೇಕು, ಮಹಿಳೆಯರನ್ನು ಸಮಾಜಕ್ಕೆ ತೋರಿಸುವಂತಿಲ್ಲ ಅನ್ನೋ ಮನೋಭಾವ. ಹೀಗಾದ್ರೆ ಆ ಮಹಿಳೆಯರು ಒಂದ್ವೇಳೆ ಜಯ ಗಳಿಸಿ ಬಂದರೆ ತಮ್ಮ ಮುಖ ತೋರಿಸಬಾರದೆಂದು ಪ್ರತಿನಿಧಿಗಳಾಗಿ ಗಂಡಂದಿರನ್ನೇ ಕಳಿಸುತ್ತಾರೆಯೇ ಅನ್ನೋ ಪ್ರಶ್ನೆಯು ಬರುತ್ತದೆ.
ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲವೆಂಬ ಆರೋಪವನ್ನು ಸ್ವತಃ ಎಸ್ ಡಿಪಿಐ ಪಕ್ಷ ಸಾಬೀತು ಮಾಡಿದಂತಾಗಿದೆ. ಸದ್ಯ ಈ ಮತಪತ್ರದ ಮಾದರಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೇನಾ ಮಹಿಳಾ ಸ್ವಾತಂತ್ರ್ಯ ಅನ್ನುವ ಟೀಕೆ ಕೇಳಿಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv