ಮೈಸೂರು: ಪತ್ನಿಯನ್ನು ಕೊಲೆ ಮಾಡಲು ಬಂದ ವ್ಯಕ್ತಿ ತನ್ನ ಮಾವನಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ಮೈಸೂರಿನ ಗೌಸಿಯಾನಗರದಲ್ಲಿ ನಡೆದಿದೆ.
ಸಲೀಂ(50) ಅಳಿಯನಿಂದ ಕೊಲೆಯಾದ ಮಾವ. ಅಳಿಯ ನದೀಂ ಅಹಮದ್ ಖಾನ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ನದೀಂ ತನ್ನ ಪತ್ನಿ ಹಸೀನಾಳ ಶೀಲದ ಮೇಲೆ ಶಂಕಿಸುತ್ತಿದ್ದನು. ಅಲ್ಲದೆ ಇದೇ ವಿಚಾರಕ್ಕಾಗಿ ಆಕೆಯ ಜೊತೆ ಜಗಳ ಕೂಡ ಮಾಡುತ್ತಿದ್ದನು.
ನದೀಂ ಹಾಗೂ ಹಸೀನಾ ಪ್ರತಿ ಬಾರಿ ಜಗಳವಾಡುವಾಗ ಮಾವ ಸಲೀಂ ಅವರ ಜಗಳವನ್ನು ಬಿಡಿಸುತ್ತಿದ್ದನು. ಇಂದು ಮುಂಜಾನೆ ಪತ್ನಿಯನ್ನು ಕೊಲೆ ಮಾಡಲು ನದೀಂ ಯತ್ನಿಸಿದ್ದಾನೆ. ಇದನ್ನು ತಡೆಯಲು ಅಡ್ಡ ಬಂದ ಮಾವನಿಗೆ ನದೀಂ ಚಾಕು ಇರಿದಿದ್ದಾನೆ.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಲೀಂರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಲೀಂ ಮೃತಪಟ್ಟಿದ್ದಾರೆ. ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.