ಪಾಟ್ನಾ: ಪ್ರೇಯಸಿಯೊಬ್ಬಳು ತನ್ನ ಪತಿಯ ಜೊತೆ ಸೇರಿ ಮಾಜಿ ಪ್ರಿಯಕರನನ್ನು ಕೊಲೆ ಮಾಡಿದ ಘಟನೆ ಬಿಹಾರದ ಮುಂಗೇರ್ ನಲ್ಲಿ ನಡೆದಿದೆ.
ಜೈ ಕರಣ್ ಕುಮಾರ್ ಕೊಲೆಯಾದ ಯುವಕ. 20 ದಿನಗಳ ಹಿಂದೆ ತೋಟದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಟೇಟಿಯಾ ಬಂಬರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಅಕ್ಟೋಬರ್ 5ರಂದು ಜೈ ಕರಣ್ ತಂದೆ ಧರ್ಮೇಂದ್ರ ಕೊಲೆ ಮಾಡಿದ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಲು ಶುರು ಮಾಡಿದ್ದರು. ಈ ಪ್ರಕರಣವನ್ನು ಶನಿವಾರ ಡಿಎಸ್ಪಿ ಪೋಲ್ಸ್ ಕುಮಾರ್ ಅವರು ಬಹಿರಂಗಗೊಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿತ್ತು. ಮೃತ ವ್ಯಕ್ತಿಯ ಮೊಬೈಲ್ ಕಾಣೆಯಾಗಿದ್ದು, ಅದನ್ನು ಆರೋಪಿಗಳು ಬಳಸುತ್ತಿದ್ದರು. ಬಳಿಕ ತನಿಖೆ ನಡೆಸಿ ಜೈ ಕರಣ್ ಪ್ರೇಯಸಿ ರವೀನಾಳನ್ನು ಬಂಧಿಸಿದ್ದೆವು. ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾಳೆ ಎಂದು ಹೇಳಿದ್ದಾರೆ.
ರವೀನಾ ಕಳೆದ ನಾಲ್ಕು ವರ್ಷಗಳಿಂದ ಜೈಕರಣ್ನನ್ನು ಪ್ರೀತಿಸುತ್ತಿದ್ದಳು. ಈ ನಡುವೆ ಆಕೆ ತನ್ನದೇ ಗ್ರಾಮದ ನಂದು ಪಾಸ್ವಾನ್ನನ್ನು ಪ್ರೀತಿಸಲು ಶುರು ಮಾಡಿದ್ದಳು. ಅಲ್ಲದೆ ಮೂರು ತಿಂಗಳ ಹಿಂದೆ ನಂದು ಜೊತೆ ರವೀನಾ ಗೌಪ್ಯವಾಗಿ ಮದುವೆ ಕೂಡ ಆಗಿದ್ದಳು. ಜೈ ಕರಣ್, ರವೀನಾ ಜೊತೆ ಯಾವಾಗಲೂ ಫೋನಿನಲ್ಲಿ ಮಾತನಾಡುತ್ತಿದ್ದನು. ಆತ ಫೋನ್ ಮಾಡುವುದು ರವೀನಾ ಹಾಗೂ ನಂದುಗೆ ಇಷ್ಟವಿರಲಿಲ್ಲ. ಹಾಗಾಗಿ ರವೀನಾ ಹಾಗೂ ನಂದು ತಮ್ಮ ಮೂವರು ಸ್ನೇಹಿತರ ಜೊತೆ ಸೇರಿ ಆತನ ಹತ್ಯೆಗೆ ಪ್ಲಾನ್ ಮಾಡಿದ್ದರು.
ಅಕ್ಟೋಬರ್ 2ರಂದು ರವೀನಾ, ಜೈ ಕರಣ್ಗೆ ಫೋನ್ ಮಾಡಿ ಭೇಟಿಯಾಗುವಂತೆ ಹೇಳುತ್ತಾಳೆ. ಈ ವೇಳೆ ನಂದು ಹಾಗೂ ಆತನ ಸ್ನೇಹಿತರು ಜೈಕರಣ್ನನ್ನು ಹೊಡೆದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಆತನ ಶವವನ್ನು ನದಿ ತೀರದಲ್ಲಿರುವ ಭತ್ತದ ಗದ್ದೆಯಲ್ಲಿ ಎಸೆದು ಹೋಗಿದ್ದರು. ಅಕ್ಟೋಬರ್ 5ರಂದು ಪೊಲೀಸರಿಗೆ ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರವೀನಾ, ಆಕೆಯ ಪತಿ ನಂದು, ದಿಲ್ಖುಷ್ ಕುಮಾರ್, ಸೋನು ಕುಮಾರ್ ಹಾಗೂ ರವಿ ಕುಮಾರ್ನನ್ನು ಬಂಧಿಸಿದ್ದಾರೆ.