ಚೆನ್ನೈ: ತಾಯಿ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುಧಾಚಲಂ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು 29 ವರ್ಷದ ಸತ್ಯವತಿ ಎಂದು ಗುರುತಿಸಲಾಗಿದೆ. ಈಕೆ ತನ್ನ ಮೂವರು ಹೆಣ್ಣು ಮಕ್ಕಳಾದ 6 ವರ್ಷದ ಅಕ್ಷಯ, 4 ವರ್ಷದ ನಂದಿನಿ ಹಾಗೂ 2 ವರ್ಷದ ದರ್ಶಿನಿಯೊಂದಿಗೆ ಕಾಲುವೆಗೆ ಹಾರಿದ್ದಾಳೆ.
ಸತ್ಯವತಿ ಪತಿ ಮಣಿಕಾಂತನ್(38) ಕುಡಿತದ ದಾಸನಾಗಿದ್ದನು. ಪ್ರತಿ ಬಾರಿಯೂ ಮದ್ಯ ಸೇವಿಸಿದ ಮರುದಿನ ಸತ್ಯವತಿಯೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದನು. ಪತಿಯ ಈ ವರ್ತನೆಯಿಂದ ಸತ್ಯವತಿ ಬೇಸರಗೊಂಡಿದ್ದಳು.
ಕಳೆದ ಸೆಪ್ಟೆಂಬರ್ 24ರಂದು ಇದೇ ರೀತಿ ಪತಿ ಹಾಗೂ ಪತ್ನಿ ನಡುವೆ ಜಗಳ ನಡೆದಿತ್ತು. ಮರು ದಿನ ಮಾತಿಗೆ ಮಾತು ಬೆಳೆದು ತಾರಕ್ಕೇರಿದ್ದರಿಂದ ಸಿಟ್ಟುಗೊಂಡ ಪತಿ, ತನ್ನ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದನು. ಕೆಲ ದಿನಗಳ ನಂತರ ಪತ್ನಿ, ತನ್ನ ಇಚ್ಛೆಯಂತೆ ಗಂಡನ ಮನೆಗೆ ವಾಪಸ್ ಬರಲು ನಿರ್ಧರಿಸಿದಳು. ಅಲ್ಲದೆ ಈ ಬಗ್ಗೆ ತನ್ನ ತಾಯಿ ಜೊತೆ ಕೂಡ ಮಾತುಕತೆ ನಡೆಸಿದ್ದಳು. ಈ ವೇಳೆ ತಾಯಿನೂ ಗಂಡನ ಮನೆಗೆ ವಾಪಸ್ ಹೋಗಲು ಮಗಳಿಗೆ ಅನುಮತಿ ನೀಡಿದರು.
ಹೀಗೆ ಸತ್ಯವತಿ ತನ್ನ ಮೂವರು ಮಕ್ಕಳೊಂದಿಗೆ ಗಂಡನ ಮನೆಗೆ ಹೊರಟ್ಟಿದ್ದಾಳೆ. ಆದರೆ ಬಸ್ಸಿನಲ್ಲಿ ತೆರಳುತ್ತಿದ್ದ ವೇಳೆ ತನ್ನ ಗಂಡನ ಕುಡಿತ ಹಾಗೂ ಜಗಳ ನೆನಪಾಗಿ ಅಲ್ಲಿಗೆ ತೆರಳಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ಚಲಿಸುತ್ತಿರುವಾಗಲೇ ಬಸ್ಸಿನಿಂದ ತನ್ನ ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾಳೆ.
ಘಟನೆಯಿಂದ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬಳು ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ತಾಯಿ ಸತ್ಯವತಿ ಅರೆ ಪ್ರಜ್ಞಾವಸ್ಥೆಯಲ್ಲಿ ಸಿಕ್ಕಿದ್ದಾಳೆ. ಕೊಚ್ಚಿ ಹೋದ ಬಾಲಕಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.