– ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಉದ್ಯಮಿ
– ಮಕ್ಕಳ ಫೀಸ್ ಕಟ್ಟಲು ಹಣವಿರಲಿಲ್ಲ
ನವದೆಹಲಿ: ಉದ್ಯಮಿಯೊಬ್ಬ ತನ್ನ ಅಪ್ರಾಪ್ತ ಮಕ್ಕಳನ್ನು ಕೊಂದು ಮೆಟ್ರೋ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಮಧುರ್, ಶ್ರೇಯಾಂಶ್ ಹಾಗೂ ಸಮೀಕ್ಷಾ ಮೃತ ದುರ್ದೈವಿಗಳು. ಆರು ತಿಂಗಳ ಹಿಂದೆ ಮಧುರ್ ತನ್ನ ಕೆಲಸವನ್ನು ಕಳೆದುಕೊಂಡಿದ್ದನು. ಇದರಿಂದ ಯಾವಾಗಲೂ ಚಿಂತೆ ಮಾಡುತ್ತಾ ಖಿನ್ನತೆಗೆ ಒಳಗಾಗಿದ್ದನು. ಅಲ್ಲದೆ ಮನೆಯ ಆರ್ಥಿಕ ಸ್ಥಿತಿ ಕೂಡ ಹದಗೆಡಲು ಶುರುವಾಯಿತು. ಮಧುರ್ ತನ್ನ ಕಷ್ಟವನ್ನು ಪತ್ನಿ ರೂಪಾಲಿ ಬಳಿ ಹೇಳಿಕೊಳ್ಳುತ್ತಿದ್ದನು.
ಮಧುರ್ ತನ್ನ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದನು. ಅಲ್ಲದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಡಾಕ್ಟರ್ ಅಥವಾ ಎಂಜಿನಿಯರ್ ಮಾಡಿಸಬೇಕು ಎಂದುಕೊಂಡಿದ್ದನು. ಆದರೆ ಮಕ್ಕಳ ಶಾಲೆಯ ಫೀಸ್ ಕಟ್ಟಲು ಮಧುರ್ ಗೆ ಕಷ್ಟವಾಗುತ್ತಿತ್ತು. ಹಾಗಾಗಿ ಮಧುರ್ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಈ ಘಟನೆಯ ವಿಷಯ ತಿಳಿದ ಮಧುರ್ ಪೋಷಕರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಧುರ್ ಪೋಷಕರನ್ನು ನೋಡುತ್ತಿದ್ದಂತೆ ಪತ್ನಿ ರೂಪಾಲಿ ದುಃಖದಿಂದ ಕೆಳಗೆ ಬಿದ್ದಳು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಈ ಘಟನೆ ನಡೆದ ನಂತರ ನಾವು ಮನೆಯನ್ನಯ ಪರಿಶೀಲಿಸಿದ್ದೇವು. ಈ ವೇಳೆ ನಮಗೆ ಯಾವುದೇ ಡೆತ್ನೋಟ್ ಸಿಗಲಿಲ್ಲ. ಮಧುರ್ ಮೃತದೇಹವನ್ನು ವಶಕ್ಕೆ ಪಡೆದಾಗ ಅವರ ಜೇಬಿನಲ್ಲಿ ಡೆತ್ನೋಟ್ ಇದೀಯಾ ಎಂದು ಪರಿಶೀಲಿಸಿದ್ದೇವೆ. ಆದರೆ ಡೆತ್ನೋಟ್ ಸಿಗಲಿಲ್ಲ. ಸದ್ಯ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಹಾಗೂ ಕಾಲ್ ಡಿಟೇಲ್ಸ್ ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದ್ದರು.
ಮಧುರ್ ಪತ್ನಿ ರೂಪಾಲಿ ಈ ಬಗ್ಗೆ ಪ್ರತಿಕ್ರಿಯಿಸಿ, ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದ ಪತಿಯೇ ಕೊಲೆ ಮಾಡಿದ್ದಾರೆ ಎಂಬುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಈ ಘಟನೆ ನಡೆದ ಒಂದು ಗಂಟೆ ಮೊದಲು ಮಧುರ್ ತನ್ನ ಇಬ್ಬರು ಮಕ್ಕಳೊಂದಿಗೆ ಉಪಹಾರ ಸೇವಿಸಿದ್ದರು. ಬಳಿಕ ನಾನು ಮಾರ್ಕೆಟ್ಗೆ ಹೋದ ಸಮಯದಲ್ಲಿ ಮಧುರ್ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಮನೆಯಲ್ಲಿಯೇ ಇದ್ದಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.