ಬೆಂಗಳೂರು: ಕನ್ನಡಿಗರ ಮನ ಗೆದ್ದಿದ್ದ ನಿರೂಪಕಿ ಅಪರ್ಣಾ (Aparna) ಅವರಿಂದು ಚಿರನಿದ್ರೆಗೆ ಜಾರಿದ್ದಾರೆ. ಇತ್ತ ಪ್ರೀತಿಯ ಮಡದಿ ಕಳೆದುಕೊಂಡು ಪತಿ ನಾಗರಾಜ್ ವಸ್ತಾರೆ (Nagaraj Ramaswamy Vastarey) ಭಾವುಕರಾಗಿದ್ದಾರೆ.
ಅಪರ್ಣಾ ವಿಧಿವಶರಾದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ನಾಗರಾಜ್ ವಸ್ತಾರೆ, ತುಂಬಾ ಖಾಸಗಿಯಾಗಿ ಬದುಕಿದವಳು ಅಪರ್ಣಾ, ಅಷ್ಟೇ ಖಾಸಗಿಯಾಗಿ ಬೀಳ್ಕೊಡಲು ಬಯಸುತ್ತೇನೆ. ಅವಳು ನನಗೆ ಸಲ್ಲೋದಕ್ಕೆ ಮುಂಚೆನೇ ಕರ್ನಾಟಕಕ್ಕೆ ಸೇರಿದವಳು. ಮಾಧ್ಯಮದವರ ಮುಂದೆಯೇ ನಿಂತು ಏನಾಯ್ತು ಅಂತಾ ಹೇಳಬೇಕು ಅನ್ನೋದು ಅವಳ ಆಸೆಯಾಗಿತ್ತು. ಅಷ್ಟನ್ನೇ ನಾನು ಹೇಳ್ತಿದ್ದೀನಿ ಎಂದರು. ಇದನ್ನೂ ಓದಿ: ನಮ್ಮ ಮೆಟ್ರೋಗೆ ಧ್ವನಿಯಾಗಿದ್ದ ಅಪರ್ಣಾ – ಬಾಡಿತು ʻಮಸಣದ ಹೂವುʼ!
ಕ್ಯಾನ್ಸರ್ ಗೊತ್ತಾಗಿದ್ದು ಹೇಗೆ?
ಎರಡು ವರ್ಷಗಳ ಹಿಂದೆ ಶ್ವಾಸಕೋಶದ ಕ್ಯಾನ್ಸರ್ (Lung cancer) ಇರುವುದು ತಪಾಸಣೆಯಲ್ಲಿ ಗೊತ್ತಾಯ್ತು. ಅದಾಗಲೇ ನಾಲ್ಕನೇ ಹಂತದಲ್ಲಿತ್ತು. ಮೊದಲು ನೋಡಿದಾಗ ವೈದ್ಯರು ಇನ್ನೂ 6 ತಿಂಗಳು ಬುಕಿದ್ದರೆ ಹೆಚ್ಚು ಅಂತ ಹೇಳಿದ್ದರು. ಆದ್ರೆ ಅವಳು ಛಲಗಾತಿ, ಏನಾದರೂ ಗೆದ್ದೇ ಗೆಲ್ಲುತ್ತೇನೆ ಅನ್ನುವ ಛಲವಿತ್ತು. ಅದಾದಮೇಲೂ ಒಂದೂವರೆ ವರ್ಷ ಹೋರಾಡಿದಳು. ಆದ್ರೆ ಕಳೆದ ಫೆಬ್ರವರಿ ತಿಂಗಳಿನಿಂದ ಸೋತಿದ್ದಳು. ಏಕೆಂದರೆ ಇದು ದೇಹವೇ ದೇಹವನ್ನ ಬಾಧಿಸುವ ವ್ಯಾದಿ, ನಾನು ಅರಿತಿರುವ ಹಾಗೆಯೇ ಕ್ಯಾನ್ಸರ್ ಅನ್ನೋದು ನೀನಲ್ಲದ ಇನ್ನೊಂದು ವ್ಯಕ್ತಿತ್ವವನ್ನ ಹೇರಲು ಬಯಸುತ್ತೆ. ಅವಳು ಧೀರೆ ಇಷ್ಟು ವರ್ಷ ಸಾಧ್ಯವಾದಷ್ಟೂ ಮಣಿಸಿದಳು. ಆದರೀಗ ನಾವಿಬ್ಬರೂ ಜಂಟಿಯಾಗಿ ಸೋತಿದ್ದೇವೆ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: Breaking: ಮಾತು ನಿಲ್ಲಿಸಿ ಚಿರನಿದ್ರೆಗೆ ಜಾರಿದ ಅಪರ್ಣಾ!
ಮುಂಬರುವ ಅಕ್ಟೋಬರ್ಗೆ 58 ವರ್ಷ ತುಂಬುತ್ತಿತ್ತು. ಅವಳ ದೇಹ ಅನ್ನೋದು ಮಾಯಕ ಅನ್ನೋದು ತೋರುತ್ತದೆ. ಏಕೆಂದರೆ ನಿಜವಾದ ವಯಸ್ಸನ್ನು ಯಾವತ್ತೂ ತೋರಿಸಲಿಲ್ಲ. 9:30 ಸುಮಾರಿನಲ್ಲಿ ದೇಹ ತನ್ನನ್ನ ತಾನೂ ಹಿಂಪಡೆದುಕೊಂಡಿತು ಎಂದು ಭಾವುಕರಾದರು. ಇದನ್ನೂ ಓದಿ: ಕಳಚಿತು ಅಚ್ಚ ಕನ್ನಡದ ಕೊಂಡಿ – ಸಿದ್ದರಾಮಯ್ಯ, ಬೊಮ್ಮಾಯಿ ಸೇರಿ ಗಣ್ಯಮಾನ್ಯರಿಂದ ಸಂತಾಪ!