ಬಾಗಲಕೋಟೆ: ಕುಡಿತಕ್ಕೆ ಹಣ ಕೊಡದ ಹಿನ್ನೆಲೆಯಲ್ಲಿ ಪತ್ನಿಯನ್ನೇ ಪತಿ ಕೊಡಲಿಯಿಂದ ಕೊಚ್ಚಿ ಕೊಲೆಗೈದು ಬಳಿಕ ತಾನೂ ನೇಣಿಗೆ ಶರಣಾದ ಘಟನೆ ಬಾಗಲಕೋಟೆ ತಾಲೂಕಿನ ಸೊಕನಾದಗಿ ಗ್ರಾಮದಲ್ಲಿ ನಡೆದಿದೆ.
ಸೊಕನಾದಗಿ ಗ್ರಾಮದ ನಿವಾಸಿ ಪರಸಪ್ಪ ಬದ್ನೂರ(38) ತನ್ನ ಪತ್ನಿ ರೇಣವ್ವ ಬದ್ನೂರ(32) ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೊಕನಾದಗಿ ಗ್ರಾಮದ ತೋಟದ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಮಂಗಳವಾರ ಪತಿ ಕುಡಿಯಲು ಹಣ ಕೊಡು ಎಂದು ಪತ್ನಿ ಬಳಿ ಕೇಳಿದ್ದಾನೆ. ಆಗ ಪತ್ನಿ ಹಣ ನೀಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪತಿ ಮನೆಯಲ್ಲಿದ್ದ ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಕೋಪದ ಕೈಗೆ ಬುದ್ಧಿಕೊಟ್ಟು ಪತ್ನಿಯನ್ನು ಕೊಲೆ ಮಾಡಿದೆ ಎಂದು ಮನನೊಂದು ಮರಕ್ಕೆ ನೇಣು ಹಾಕಿಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ಮರದಲ್ಲಿ ನೇತಾಡುತ್ತಿದ್ದ ಪರಸಪ್ಪನ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.