– ಮಗಳಿಗೆ ನ್ಯಾಯ ಕೊಡಿಸಿ ಅಂತ ನಿವೃತ್ತ ಎಎಸ್ಐ ಕಣ್ಣೀರು!
ಬೆಂಗಳೂರು: ಒಂದೇ ಒಂದು ಸಾಕ್ಷಿ ಸಿಗದಂತೆ ವ್ಯಕ್ತಿಯೊಬ್ಬ ಎರಡನೇ ಮದುವೆಯಾಗಿದ್ದಾನೆ. ಇತ್ತ ತನ್ನ ಜೀವನವನ್ನೆಲ್ಲಾ ಪೊಲೀಸ್ ಇಲಾಖೆಯಲ್ಲಿ ಕಳೆದು ನಿವೃತ್ತರಾಗಿರುವ ಎಎಸ್ಐ ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
ದಾಸಪ್ಪ ನಿವೃತ್ತ ಎಎಸ್ಐ ಅಧಿಕಾರಿ. ತನ್ನ ಜೀವಮಾನವೆಲ್ಲಾ ಪೊಲೀಸ್ ಇಲಾಖೆಗಾಗಿ ಮುಡುಪಾಗಿಟ್ಟು ಸಾಕಷ್ಟು ಜನರಿಗೆ ನ್ಯಾಯ ಕೊಡಿಸಿದ್ದಾರೆ. ಆದರೆ ಇದೀಗ ಸ್ವಂತ ಮಗಳಿಗೆ ನ್ಯಾಯ ಕೊಡಿಸಲಾಗದ ಸ್ಥಿತಿಯಲ್ಲಿದ್ದಾರೆ.
ದಾಸಪ್ಪ ಅವರು 13 ವರ್ಷದ ಹಿಂದೆ ಮಗಳು ಗೀತಾಳನ್ನ ಚನ್ನನಾಯಕನ ಪಾಳ್ಯದ ನಾಗರಾಜ್ ಅನ್ನೋರಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದಗಿನಿಂದ ನಾಗರಾಜ್ ಕುಡಿದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು. ಕೊನೆಗೆ ಎರಡು ಮಕ್ಕಳ ಜೊತೆಗೆ ಕಷ್ಟದಿಂದ ಸಂಸಾರ ಸಾಗಿಸುತ್ತಿದ್ದ ಗೀತಾ ಪತಿಯ ಕಿರುಕುಳ ತಾಳಲಾರದೆ ಅಪ್ಪನ ಮನೆ ಸೇರಿದ್ದರು. ಇತ್ತ ಹೆಂಡತಿ ತವರಿಗೆ ಹೋದ ತಕ್ಷಣ ನಾಗರಾಜ್ ಶಿರಾದ ಬಳಿಯ ದೇವಸ್ಥಾನವೊಂದರಲ್ಲಿ ಮತ್ತೊಂದು ಹುಡುಗಿಯನ್ನ ಮದುವೆಯಾಗಿದ್ದಾನೆ.
ನಮ್ಮ ಸೊಸೆ ಓಡಿ ಹೋಗಿ ಎರಡು ವರ್ಷವಾಗಿದೆ. ನೀವೇನು ಹೆದರ ಬೇಡಿ ಅಂತ ನಾಗರಾಜನ ಅಪ್ಪ ಮುನಿಯಪ್ಪ ನಮಗೆ ಹೇಳಿ ನಂಬಿಸಿದ್ದರು. ಅಷ್ಟೇ ಅಲ್ಲದೇ ನಾಗರಾಜ್ ಮದುವೆ ದಿನ ಒಂದೇ ಒಂದು ಫೋಟೋ ಕೂಡ ತೆಗೆಯೋಕೆ ಬಿಡಲಿಲ್ಲ. ನಮಗೆ ಮೋಸ ಮಾಡಿ ನನ್ನ ಮಗಳನ್ನು ಎರಡನೇ ಮದುವೆ ಮಾಡಿಕೊಂಡಿದ್ದಾನೆ ಎಂದು ಎರಡನೇ ಪತ್ನಿಯ ತಂದೆ ಚೌಡಪ್ಪ ಹೇಳಿದ್ದಾರೆ.
ಈ ಅನ್ಯಾಯದ ಬಗ್ಗೆ ನಿವೃತ್ತ ಎಎಸ್ಐ ದಾಸಪ್ಪ ಪೀಣ್ಯ ಪೊಲೀಸ್ ಠಾಣೆಗೆ ಅಲೆದೂ ಅಲೆದೂ ಸಾಕಾಗಿ ಹೋಗಿದ್ದಾರೆ. ಪೊಲೀಸರಿಗೆ ಈ ತರಹದ ಅನ್ಯಾಯವಾದರೆ ಜನಸಾಮನ್ಯರಿಗೆ ನ್ಯಾಯ ಸಿಗುತ್ತಾ ಅನ್ನೋ ಪ್ರಶ್ನೆ ಕಾಡುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv