ಚಿಕ್ಕಮಗಳೂರು: ಪ್ರೀತಿಸಿ (Love) ಮದುವೆಯಾಗಿದ್ದ ಪತ್ನಿಯನ್ನು (Wife) ಚಾಕು ಇರಿದು ಹತ್ಯೆಗೈದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಕೈಮರಾ ಚೆಕ್ ಪೋಸ್ಟ್ ಬಳಿ ನಡೆದಿದೆ.
ಮೃತ ಮಹಿಳೆಯನ್ನು ಕೀರ್ತಿ (26) ಎಂದು ಗುರುತಿಸಲಾಗಿದೆ. ಆಕೆಯ ಪತಿ ಅವಿನಾಶ್ (32) ಹತ್ಯೆಗೈದ ಆರೋಪಿಯಾಗಿದ್ದಾನೆ. ಇಬ್ಬರ ನಡುವೆ ಜಗಳವಾಗಿದೆ. ಇದೇ ಕಾರಣಕ್ಕೆ ಆರೋಪಿ ಮನಸ್ಸೋ ಇಚ್ಛೇ ಚಾಕು ಚುಚ್ಚಿ ಕೊಲೆಗೈದಿದ್ದಾನೆ. ಇಬ್ಬರು 4 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಹೀಂ ಹತ್ಯೆ| ಮಂಗಳೂರು-ಬಂಟ್ವಾಳ ರಸ್ತೆಯಲ್ಲಿರುವ ನೂರಾರು ಅಂಗಡಿಗಳು ಬಂದ್
ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗುವಿದೆ. ಕಳೆದ ವಾರ ಇಬ್ಬರೂ, ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಇಬ್ಬರೂ ಖುಷಿಯಾಗಿಯೇ ಇದ್ದರು. ಆದರೆ, ಅವಿನಾಶ್ ಆಕೆಗೆ ಡಿವೋರ್ಸ್ ನೀಡು ಎಂದು ಕಿರುಕುಳ ನೀಡುತ್ತಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಮೃತ ಕೀರ್ತಿ 4 ತಿಂಗಳ ಗರ್ಭೀಯಾಗಿದ್ದು ಮನೆಯವರಿಗೆ ಗೊತ್ತಿಲ್ಲದಂತೆ ಅಬಾರ್ಷನ್ ಕೂಡ ಮಾಡಿಸಿದ್ದನಂತೆ. ಅಮ್ಮನ ಮನೆಯಲ್ಲಿದ್ದ ಕೀರ್ತಿ ಇಂದು ಬೆಳಗ್ಗೆ ಬಟ್ಟೆ ತೊಳೆದುಕೊಂಡು ಬರುತ್ತೇನೆ ಎಂದು ಹೋದಾಗ, ಆರೋಪಿ ಚಾಕು ಇರಿದಿದ್ದಾನೆ. ಕೂಡಲೇ ಆಕೆಯೇ ಆತನನ್ನ ತಳ್ಳಿ, ರಕ್ತದ ಮಡುವಿನಲ್ಲೇ ರಸ್ತೆಗೆ ಬಂದು ಕೂಗಾಡಿದಾಗ ಮನೆಯವರು, ಅಕ್ಕಪಕ್ಕದವರು ಆಕೆಯನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೀರ್ತಿ ಸಾವನ್ನಪ್ಪಿದ್ದಾಳೆ. ಕೊಲೆಗೆ ಅವಿನಾಶ್ ಅಕ್ಕನೇ ಕಾರಣ ಎಂದು ಕೀರ್ತಿ ಪೋಷಕರು ಆರೋಪಿಸಿದ್ದಾರೆ.
ಪತ್ನಿಯ ಹತ್ಯೆ ಬಳಿಕ ಆರೋಪಿ ಅವಿನಾಶ್ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಅಬ್ದುಲ್ ರಹೀಂ ಹತ್ಯೆ| ಇಬ್ಬರು ಪರಿಚಯಸ್ಥರು ಸೇರಿ 15 ಮಂದಿ ವಿರುದ್ಧ ಎಫ್ಐಆರ್