ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾಗಿ 2 ವರ್ಷ ಸುಖ ಸಂಸಾರ ಮಾಡಿದ ವ್ಯಕ್ತಿಯೊಬ್ಬ, ಇದೀಗ ನಿನಗೆ ಮಕ್ಕಳಾಗಲಿಲ್ಲ, ನೀನು ಹೆಣ್ಣೇ ಅಲ್ಲ ನನಗೆ ನೀನು ಬೇಡವೇ ಬೇಡ ಅಂತಾ ಹೆಂಡತಿ ಬಿಟ್ಟುಬಿಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಚಿಕ್ಕನೆಂಚರ್ಲು ಗ್ರಾಮದ ಶ್ರೀನಿವಾಸ್ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಅರಸನಹಳ್ಳಿ ಗ್ರಾಮದ ವೇದಾಕುಮಾರಿ ಇಬ್ಬರೂ 3 ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದರು. ಅಲ್ಲದೇ ಇಬ್ಬರೂ ಎರಡು ಕುಟುಂಬದವರನ್ನು ಒಪ್ಪಿಸಿ ಮದ್ವೆ ಆಗಿದ್ರು. ವೃತ್ತಿಯಲ್ಲಿ ಖಾಸಗಿ ಬಸ್ ಚಾಲಕನಾಗಿದ್ದ ಶ್ರೀನಿವಾಸ್, ಕಳೆದ 2 ವರ್ಷಗಳವರೆಗೆ ಸುಖ ದಾಂಪತ್ಯ ನಡೆಸಿದ್ದನು. ಆದ್ರೆ ಈವರೆಗೂ ಮಕ್ಕಳಾಗಿಲ್ಲ. ಹೀಗಾಗಿ ಪತಿ, ಪತ್ನಿಯನ್ನು ದೂರ ಮಾಡಿದ್ದು, ಇದೀಗ ಪತ್ನಿ ನನ್ನ ಗಂಡ ನನಗೆ ಬೇಕು ಅಂತ ಪೊಲೀಸ್ ಠಾಣೆ ಮೆಟ್ಟೇಲೇರಿದ್ದಾರೆ.
ಬಡವರಾಗಿದ್ದ ವೇದಕುಮಾರಿ ಮನೆಯವರು ಕೈಲಾದ ಮಟ್ಟಿಗೆ ಮದ್ವೆ ಮಾಡಿಕೊಟ್ಟಿದ್ರು. ಮೊದಮೊದಲು ಚೆನ್ನಾಗಿಯೆ ಇದ್ದ ಶ್ರೀನಿವಾಸ್ ಬಳಿಕ ತವರು ಮನೆಯಿಂದ ದುಡ್ಡು, ಒಡವೆ ತರುವಂತೆ ಪೀಡಿಸಿದ್ದಾನೆ. ಶ್ರೀನಿವಾಸ್ಗೆ ಆತನ ತಾಯಿ, ಅಕ್ಕ ಕೂಡ ಸಾಥ್ ನೀಡಿದ್ದಾರೆ. ಆದರೆ ನಾನು ಯಾವಾಗ ದುಡ್ಡು, ಒಡವೆ ತರಲಿಲ್ಲವೋ ಆವಾಗಿಂದ ನೀನು ಹೆಣ್ಣೇ ಅಲ್ಲ. ನೀನು ನನಗೆ ಬೇಡ. ಮನೆ ಬಿಟ್ಟು ಹೋಗು. ನನಗೆ ವಿಚ್ಛೇದನ ಕೊಡು ಅಂತ ಕಿರುಕುಳ ಕೊಡುತ್ತಿದ್ದಾನೆ. ಅಲ್ಲದೇ ನನ್ನಿಂದ ದೂರವಾಗಿ ಬೇರೆ ಕಡೆ ಜೀವನ ನಡೆಸುತ್ತಿದ್ದಾನೆ ಅಂತ ಪತ್ನಿ ವೇದಕುಮಾರಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇತ್ತ ಮೊಮ್ಮಗಳ ಬಾಳು ಈ ರೀತಿ ಆಯ್ತಲ್ಲಾ ಅಂತ ನೊಂದಿರುವ ವೇದಕುಮಾರಿ ತಾತ ಮುನಿಯಪ್ಪ, ಇದಕ್ಕೆಲ್ಲಾ ಶ್ರೀನಿವಾಸ್ನ ತಾಯಿ, ಅಕ್ಕ ಹಾಗೂ ಅತ್ತೆ ಗುಡಿಬಂಡೆ ಪಟ್ಟಣ ಪಂಚಾಯತಿಯ ಸದಸ್ಯೆ ಲಕ್ಷ್ಮಮ್ಮ ಕುಮ್ಮಕ್ಕಿದೆ ಎಂದು ಆರೋಪಿದ್ದಾರೆ.
ಈ ಬಗ್ಗೆ ವೇದಕುಮಾರಿ ಗುಡಿಬಂಡೆ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಶ್ರೀನಿವಾಸ್ಗೆ ಕರೆದು ಬುದ್ಧಿವಾದ ಹೇಳಿದ್ರು. ಆಗಲೂ ಬದಲಾಗದ ಈತ ನನಗೆ ಪತ್ನಿ ಬೇಡವೇ ಬೇಡ, ಡೈವೋರ್ಸ್ ಕೊಟ್ಟು ಸೆಟ್ಲಮೆಂಟ್ ಮಾಡಿ ಅಂತಿದ್ದಾನೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾರ ಬಳಿಯೂ ವೇದಕುಮಾರಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ. ಒಟ್ಟಿನಲ್ಲಿ ಪ್ರೀತಿಸಿ ಕೈ ಹಿಡಿದವಳಿಗೆ ಮಕ್ಕಳಾಗಲಿಲ್ಲ ಅಂತ ದೂರ ತಳ್ತಿರೋದು ಮಾತ್ರ ದುರಂತವೇ ಸರಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv