ತುಮಕೂರು: ಮಾನಸಿಕ ಖಿನ್ನತೆಗೊಳಗಾಗಿದ್ದ ಬ್ಯಾಂಕ್ ಉದ್ಯೋಗಿಯೊಬ್ಬ ತನ್ನ ಪತ್ನಿ, ಮಗಳು ಹಾಗೂ ಅತ್ತೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ.
ಪಾವಗಡದ ರೇನ್ ಗೇಜ್ ಬಡಾವಣೆಯಲ್ಲಿ ವಾಸವಿದ್ದ ಎಸ್ಬಿಐ ಬ್ಯಾಂಕ್ ನ ಉದ್ಯೋಗಿ ರವಿ ಎಂಬಾತ ತನ್ನ ಪತ್ನಿ ಮಾಧವಿ, ಅತ್ತೆ ಪದ್ಮಾವತಿ ಹಾಗೂ ಮಗಳು ಪ್ರಳವಿಕಾ ಮೇಲೆ ಮನಸೋ ಇಚ್ಚೆಯಂತೆ ಮಚ್ಚಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ.
ತಡರಾತ್ರಿ ನಿದ್ದೆಯಲ್ಲಿದ್ದ ಪತ್ನಿ ಮಾಧವಿ ಮೇಲೆ ಏಕಾಏಕಿ ಹಲ್ಲೆ ನಡೆಸಲು ಮುಂದಾಗಿದ್ದು, ತಡೆಯಲು ಹೋದ ಮಗಳು ಹಾಗೂ ಅತ್ತೆಗೂ ಸಹ ಮಚ್ಚು ಬೀಸಿದ್ದಾನೆ. ತೀವ್ರವಾಗಿ ಗಾಯಗೊಂಡ ಮೂವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎಸ್ಬಿಐ ನಲ್ಲಿ ಕ್ಯಾಶಿಯರ್ ಆಗಿರುವ ರವಿ ಕಳೆದ ಎರಡು ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಅಲ್ಲದೆ ಇತ್ತೀಚೆಗೆ ಬೇರೆಡೆ ವರ್ಗವಾಗಿದ್ದರೂ ಸಹ ಹೋಗಿರಲಿಲ್ಲ. ಈ ಬಗ್ಗೆ ಪತ್ನಿ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.