-ಅವನ ರುಂಡ, ಇವಳ ಬೆರಳು ಕಟ್
ರಾಯ್ಪುರ್: ವ್ಯಕ್ತಿಯೊಬ್ಬ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದು ಆಕೆಯ ಪ್ರಿಯಕರನ ಕತ್ತು ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಛತ್ತೀಸ್ಗಢದ ಕಾಂಕರ್ ಜಿಲ್ಲೆಯಲ್ಲಿ ನಡೆದಿದೆ.
ರಾಕೇಶ್ ಕೊಲೆಯಾದ ಪ್ರಿಯಕರ. ಆರೋಪಿ ವಿನಯ್ ರೈ ಪತ್ನಿ ಬೀನಾ ರೈ ಈತನ ಜೊತೆ ಅನೇಕ ದಿನಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಹೀಗಾಗಿ ಕೋಪಗೊಂಡ ಪತಿ ಕೊಲೆ ಮಾಡಿದ್ದಾನೆ. ಈ ಘಟನೆ ನಂತರ ಗ್ರಾಮದಲ್ಲಿ ಗಲಾಟೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕೊಲೆ ಮಾಡಿದ ನಂತರ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಏನಿದು ಪ್ರಕರಣ?
ಆರೋಪಿ ವಿನಯ್ ಕೆಲಸದ ಮೇಲೆ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದನು. ಪತಿ ಮನೆಯಲ್ಲಿ ಇಲ್ಲದ ವೇಳೆ ಪತ್ನಿ ಅದೇ ಗ್ರಾಮದ 35 ವರ್ಷದ ರಾಕೇಶ್ ಮಂಡಲ್ ಎಂಬವನ ಜೊತೆ ಸಂಬಂಧ ಇಟ್ಟುಕೊಂಡಿದ್ದಳು. ದಿನಕಳೆದಂತೆ ಇಬ್ಬರು ಮಕ್ಕಳ ಜೊತೆ ಬೀನಾ ರೈ ತನ್ನ ಪ್ರಿಯಕರ ಜೊತೆ ವಾಸಿಸುತ್ತಿದ್ದಳು. ಇತ್ತ ಪತಿ ಬೀನಾಗೆ ಫೋನ್ ಮಾಡಿದರೆ ಬ್ಯುಸಿ ಬರುತ್ತಿತ್ತು. ಆದರೆ ಮತ್ತೆ ಫೋನ್ ಮಾಡುತ್ತಿರಿಲ್ಲ. ಕೊನೆಗೆ ಅನುಮಾನಗೊಂಡ ಪತಿ ಮಹಾರಾಷ್ಟ್ರದಿಂದ ನೇರವಾಗಿ ರಾಕೇಶ್ ಮನೆಗೆ ಆಯುಧದ ಜೊತೆಗೆ ಹೋಗಿದ್ದಾನೆ.
ಈ ವೇಳೆ ರಾಕೇಶ್ ಮತ್ತು ಬೀನಾ ಪಕ್ಕದಲ್ಲಿ ಕುಳಿತುಕೊಂಡು ಮೊಬೈಲಿನಲ್ಲಿ ಸಿನಿಮಾ ನೋಡಿತ್ತಿದ್ದರು. ಮಕ್ಕಳಿಬ್ಬರು ಮನೆ ಹೊರಗಡೆ ಆಟವಾಡುತ್ತಿದ್ದರು. ಆಗ ಕೋಪಗೊಂಡ ವಿನಯ್ ಆಯುಧದಿಂದ ರಾಕೇಶ್ನ ಕತ್ತು ಕತ್ತರಿಸಿದ್ದಾನೆ. ಈ ವೇಳೆ ಬೀನಾ ಕಾಪಾಡಲು ಮುಂದೆ ಬಂದಿದ್ದಾಳೆ. ಪರಿಣಾಮ ಆಕೆಯ ಎರಡು ಬೆರಳು ಕಟ್ ಆಗಿದೆ. ಅಷ್ಟರಲ್ಲಿ ಮಗು ಬಂದು ಬೀನಾಳನ್ನು ರಕ್ಷಿಸಿದೆ ಇಲ್ಲವಾದಲ್ಲಿ ಆಕೆಯೂ ಕೊಲೆಯಾಗುತ್ತಿದ್ದಳು ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.