ಹಾವೇರಿ: ಸಾವು-ಬದುಕಿನ ನಡುವೆ ಹೋರಾಡ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಲು ಜನರು ಹಿಂದೇಟು ಹಾಕಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಮಾದವನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ಬೈಕ್ ಮತ್ತು ಟೆಂಪೋ ನಡುವೆ ಮುಖಾಮುಖಿ ಡಿಕ್ಕಿಯ ಪರಿಣಾಮ ಓರ್ವ ಮೃತಪಟ್ಟಿದ್ರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು 38 ವರ್ಷ ಗಂಗಪ್ಪ ಭಜಂತ್ರಿ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ನಡುರಸ್ತೆಯಲ್ಲೇ 37 ವರ್ಷ ಸುರೇಶಪ್ಪ ಗೊರವರವರು ಸಾವು-ಬದುಕಿನ ನಡುವೆ ಹೋರಾಡ್ತಿದ್ದರು. ಆದ್ರೆ ಗಾಯಾಳುವನ್ನ ಮುಟ್ಟಿದ್ರೆ ಮೈಮೇಲೆ ಕೇಸ್ ಬರುತ್ತೆ ಜನರು ಮಾತನಾಡಿಕೊಳ್ತಿದ್ದರೇ ವಿನಃ ಯಾರೋಬ್ಬರೂ ಅವರ ಸಹಾಯಕ್ಕೆ ಬರಲಿಲ್ಲ.
ಬರೋಬ್ಬರಿ ಅರ್ಧ ಗಂಟೆ ನಂತರ ಅಂಬ್ಯುಲೆನ್ಸ್ ಸ್ಥಳಕ್ಕೆ ದೌಡಾಯಿಸಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗುತ್ತಲ ಪಟ್ಟಣದಿಂದ ರಾಣೇಬೆನ್ನೂರು ನಗರದತ್ತ ತೆರಳ್ತಿದ್ದ ಈ ಘಟನೆ ಸಂಭವಿಸಿದೆ.
ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.