ಧಾರವಾಡ/ಹುಬ್ಬಳ್ಳಿ: ಕನ್ನಡ ವಿಷಯ ಬೋಧನೆ ಮಾಡುವ ಶಿಕ್ಷಕರಿಗೆ ಕನ್ನಡದ ಸಂಧಿಗಳ ಬಗ್ಗೆ ಸಾಮಾನ್ಯ ಜ್ಞಾನವು ಇಲ್ಲದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಹುಬ್ಬಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರಾದ ವಿ.ಎಫ್.ಚಳಕಿ ಹಾಗೂ ಎಸ್.ಆರ್.ಹೂಲಿ ಶಿಕ್ಷಕರು ಸಂಧಿಗಳನ್ನು ತಪ್ಪಾಗಿ ಹೇಳಿದ್ದಾರೆ. ಮತ್ತೊಬ್ಬ ಶಿಕ್ಷಕ ಗಾಂಧೀಜಿ ಅವರ ಜನ್ಮ ದಿನವನ್ನು ಇಲಾಖೆ ಅಧಿಕಾರಿಗಳ ಮಂದೆ ತಪ್ಪಾಗಿ ಹೇಳಿದ್ದರಿಂದ ನೋಟಿಸ್ ನೀಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗಯ್ಯ ಹಿರೇಮಠ್ ನೋಟಿಸ್ ಜಾರಿ ಮಾಡಿದ್ದಾರೆ. ಇಲಾಖೆ ಅಧಿಕಾರಿಗಳ ವಿರುದ್ಧ ಶಾಲಾ ಸಮಯದಲ್ಲೇ ದೂರು ನೀಡಲು ಈ ಇಬ್ಬರು ಶಿಕ್ಷಕರು ಕಚೇರಿಗೆ ಬಂದಿದ್ದಾರೆ. ಈ ವೇಳೆ ಸಿದ್ದಲಿಂಗಯ್ಯ ಹಿರೇಮಠ್ ಅವರು ಪ್ರಶ್ನೆ ಕೇಳಿದ್ದಾರೆ. ಗಾಂಧೀಜಿ ಜನಿಸಿದ್ದು ಯಾವಾಗ ಎಂಬ ಪ್ರಶ್ನೆಗೆ ಶಿಕ್ಷಕ ವಿ.ಎಫ್.ಚಳಕಿ 1857ರ ಅಕ್ಟೋಬರ್ 5 ಎಂದು ತಪ್ಪಾಗಿ ಉತ್ತರಿಸಿದ್ದಾರೆ.
ಸಂಧಿ ಎಂದರೇನು? ಪ್ರಕಾರಗಳೆಷ್ಟು? ಎಂದು ಮತ್ತೊಬ್ಬ ಶಿಕ್ಷಕ ಎಸ್.ಆರ್.ಹೂಲಿ ಅವರನ್ನು ಪ್ರಶ್ನಿಸಿದಾಗ ಉತ್ತರಿಸಲು ತಡಬಡಾಯಿಸಿದ್ದಾರೆ. ಮಕ್ಕಳಿಗೆ ತಾವು ಬೋಧಿಸುವ ವಿಷಯದ ಬಗ್ಗೆ ಜ್ಞಾನವೇ ಇಲ್ಲದ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಈ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.