ಹುಬ್ಬಳ್ಳಿ: ರಾಜ್ಯದ ಇತಿಹಾಸದಲ್ಲಿ ಕರಾಳ ಅಧ್ಯಾಯವನ್ನು ಸ್ಪೀಕರ್ ಸೃಷ್ಟಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು ಸ್ಪೀಕರ್ 14 ಜನ ಅತೃಪ್ತ ಶಾಸಕರ ಅನರ್ಹ ಮಾಡಿದ ವಿಚಾರವಾಗಿ ಮಾತನಾಡಿದ ಜೋಶಿ, ಸ್ಪೀಕರ್ ಆದೇಶ ಒಂದು ದುರ್ದೈವ. ಸ್ಪೀಕರ್ ಮಾತನ್ನು ಕೇಳಿ ಜನ ಅವರನ್ನು ನಂಬಿದ್ದರು. ಆದರೆ ಸ್ಪೀಕರ್ ಹೇಳಿದ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಖುದ್ದು ಹಾಜರಾಗಿ ಶಾಸಕರು ರಾಜೀನಾಮೆ ನೀಡಿದಾಗಲೂ ಸ್ಪೀಕರ್ ಸುಮ್ಮನೆ ಇದ್ದರು. ರಾಜೀನಾಮೆ ಕೊಟ್ಟು ತಿಂಗಳ ಬಳಿಕ ಅನರ್ಹಗೊಳಿಸಿದ್ದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅವರು ಒತ್ತಡಕ್ಕೆ ಮಣಿದು ಅನರ್ಹ ಮಾಡಿರುವುದು ಈಗ ಜಗಜ್ಜಾಹೀರಾಗಿದೆ. ಖುದ್ದು ಶಾಸಕರೇ ಬಂದು ರಾಜೀನಾಮೆ ನೀಡಿದಾಗ ಅದನ್ನು ಸ್ವೀಕಾರ ಮಾಡುವುದಷ್ಟೇ ಸ್ಪೀಕರ್ ಕೆಲಸ. ಅದನ್ನು ಬಿಟ್ಟು ಅನರ್ಹತೆ ಮಾಡಿರುವುದು ರಮೇಶ್ ಕುಮಾರ್ ಅವರ ಘನತೆಗೆ ಧಕ್ಕೆ ತಂದಿದೆ ಎಂದು ಹೇಳಿದರು.
ಇದೇ ವೇಳೆ ಅನರ್ಹ ಶಾಸಕರ ಬೆನ್ನಿಗೆ ಬಿಜೆಪಿ ನಿಲ್ಲಲ್ಲ. ಆದರ ಬದಲು ಪ್ರಜಾಪ್ರಭುತ್ವದ ಉಳಿವಿಗೆ ಬಿಜೆಪಿ ನಿಲ್ಲಲಿದೆ. ಸ್ಪೀಕರ್ ಆದೇಶಕ್ಕೆ ಸುಪ್ರೀಂಕೋರ್ಟ್ ತಕ್ಕ ಉತ್ತರ ನೀಡಲಿದೆ ಎಂದು ಸ್ಪಷ್ಟಪಡಿಸಿದರು.