ಹುಬ್ಬಳ್ಳಿ: ಜೈನ್ ಮಂದಿರದ ಬಳಿ ಮನೆಯ ಪಾಯಾ ತಗೆಯುವಾಗ ಬಂಗಾರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನ ಕಡಿಮೆ ದರಕ್ಕೆ ಕೊಡುತ್ತೇನೆ ಎಂದು ಸುಳ್ಳು ಹೇಳಿ ರಾಜಸ್ಥಾನದ ಉದ್ಯಮಿಗೆ ನಂಬಿಸಿ ಹಣ ಪಡೆದು ಮೋಸ ಮಾಡಿದ್ದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹರಪನಹಳ್ಳಿ ತಾಲೂಕಿನ ಕೊರಚರಹಟ್ಟಿ ಮಾಚೆಹಳ್ಳಿಯ ಸಾತಪ್ಪ ಕೊರಚಾ ಬಂಧಿತ ಆರೋಪಿ. ಬಂಧಿತನಿಂದ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಎರಡೂವರೆ ಲಕ್ಷ ರೂ.ವನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದಾರೆ. ಆರೋಪಿ ಸಾತಪ್ಪ ಹುಬ್ಬಳ್ಳಿಯ ಹೊಸ ಗಬ್ಬೂರು ಸಮೀಪದ ಜೈನ ಮಂದಿರದ ಬಳಿ ಮನೆಯ ಪಾಯಾ ಕಡಿಯುವಾಗ ಹಳೇ ಕಾಲದ ಬಂಗಾರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಮಾರುತ್ತಿದ್ದೇನೆ ಎಂದು ರಾಜಸ್ಥಾನ ಮೂಲದ ಸಹದೇವ್ ಶಿರೋಹಿ ಅವರಿಗೆ ಹೇಳಿದ್ದ. ಹೀಗಾಗಿ ಸಹದೇವ್ ಅವರು 3.5 ಲಕ್ಷ ರೂಪಾಯಿ ಹಣ ನೀಡಿ 750 ಗ್ರಾಂ ತೂಕದ ಸಣ್ಣ ಸಣ್ಣ ನಕಲಿ ಬಂಗಾರದ ನಾಣ್ಯಗಳನ್ನ ಖರೀದಿಸಿದ್ದರು.
ಆರೋಪಿಯ ಮೋಸ ತಿಳಿಯುತ್ತಿದ್ದಂತೆ ಸಹದೇವ್ ಶಿರೋಹಿ ಅವರು ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗೆ ಬಲೆ ಬೀಸಿದ್ದರು. ಸದ್ಯ ಆರೋಪಿ ಸಾತಪ್ಪನನ್ನು ಬಂಧಿಸಿ, 2 ಲಕ್ಷ ರೂ.ವನ್ನು ಜಪ್ತಿ ಮಾಡಿದ್ದಾರೆ.
ಆರೋಪಿ ಬಂಧನಕ್ಕಾಗಿ ವಿಶೇಷ ತಂಡವು ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಿ, ಆತನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದೆ. ಹೀಗಾಗಿ ತನಿಖಾ ತಂಡದ ಸಿಬ್ಬಂದಿಯ ಕಾರ್ಯವೈರ್ಖರಿಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರು ಮೆಚ್ಚಿ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.