– ನಡು ರಸ್ತೆಯಲ್ಲೇ ಶ್ರೀಗಳ ಭಾಷಣ
– 45 ದಿನದ ಗಡವು ನೀಡಿದ ದಿಂಗಾಲೇಶ್ವರ ಶ್ರೀ
ಹುಬ್ಬಳ್ಳಿ: ಮೂರುಸಾವಿರ ಮಠ ಉತ್ತರಾಧಿಕಾರವಾಗಿ ಇಂದು ಕೂಡ ಸತ್ಯ ದರ್ಶನವಾಗಲಿಲ್ಲ. ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ಮೂರು ಸಾವಿರ ಮಠದಲ್ಲಿ ಇಂದು ದತ್ತದರ್ಶನಕ್ಕೆ ಆಹ್ವಾನ ನೀಡಿದ್ದರು. ಆದರೆ ಅವರಿಗೆ ಮಠ ಪ್ರವೇಶಿಸಿದಂತೆ ಬ್ಯಾರಿಕೇಡ್ ಹಾಕಲಾಗಿತ್ತು. ಹೀಗಾಗಿ ಮೂರು ಸಾವಿರ ಮಠದ ಹೊರಭಾಗದಲ್ಲಿಯೇ ಭಕ್ತರನ್ನು ಉದ್ದೇಶಿಸಿ ದಿಂಗಾಲೇಶ್ವರ ಸ್ವಾಮೀಜಿಗಳು ಮಾತನಾಡಿದರು.
ಬಳಿಕ ಮಠ ಪ್ರವೇಶಿಸಿದ ಅವರು, ಜಗದ್ಗುರು ಗುರುಸಿದ್ದೇಶ್ವರ ಮಹಾಶಿವಯೋಗಿಗಳ ಗದ್ದುಗೆ ದರ್ಶನ ಪಡೆದುಕೊಂಡರು. ಬಳಿಕ ಮಾತನಾಡಿದ ಅವರು, ನಾವು ಯಾವುದೇ ಗಲಾಟೆ ಮಾಡಲು ಬಂದಿಲ್ಲ. ಮಠದ ಮೇಲೆ ಅಭಿಮಾನ ಉಳ್ಳವರು. ಮುಂದಿನ 45 ದಿನಗಳಲ್ಲಿ ವ್ಯಾಜ್ಯ ಇತ್ಯರ್ಥವಾಗಬೇಕು. ಅಲ್ಲಿಯವರೆಗೆ ಬಾಯಿ ಮೆಚ್ಚಿಕೊಂಡು ಕೂರುತ್ತೇನೆ. ಜಗದ್ಗುರುಗಳು, ಮಠದ ಶ್ರೀಗಳು ಇತ್ಯರ್ಥ ಪಡಿಸಬೇಕು ಎಂಬ ಗಡುವು ನೀಡಿದರು.
ಶನಿವಾರ ರಾತ್ರಿ ಕೆಲವರು ನಮ್ಮ ಬಳಿ ಬಂದಿದ್ದರು. ಸತ್ಯ ದರ್ಶನ ನಿಲ್ಲಿಸಲು ಒತ್ತಡ ಹೇರಿದ್ದರು. ನಮ್ಮ ಗುರುಗಳನ್ನು ಕಟ್ಟಿಹಾಕುವ ಯತ್ನ ನಡೆದಿದೆ. ಇದರಲ್ಲಿ ಕೆಲ ಕಾವಿಧಾರಿಗಳ ಕುತಂತ್ರವಿದೆ. ಈ ಭಾರೀ ಸತ್ಯ ದರ್ಶನ ಆಗಿಲ್ಲ. ಕೋರ್ಟಿನಲ್ಲಿ ಇತ್ಯರ್ಥ ಬೇಡ ಎಂದರು.
ಆಸ್ತಿ, ಅಧಿಕಾರ, ಪಟ್ಟಕ್ಕಾಗಿ ಪಟ್ಟಾಧಿಕಾರ ಬೇಡ:
ನಾನು ಮೂರುಸಾವಿರ ಮಠದ ಆಸ್ತಿಗೆ ಆಸೆ ಪಟ್ಟಿಲ್ಲ. ಆದರೆ ನಾನು ಉತ್ತರಾಧಿಕಾರಿ ಎಂದು ಗೊತ್ತಾದ ಮೇಲೆಯೇ ನನ್ನ ಮೇಲೆ ಕೊಲೆ ಪ್ರಕರಣ ಹೊರಿಸಲಾಗಿತ್ತು. ಅಷ್ಟೇ ಅಲ್ಲದೆ ಕೊಲೆಗೂ ಪ್ರಯತ್ನ ನಡೆದಿವೆ. ನಾನು ದೊಡ್ಡ ಮಠದ ಸ್ವಾಮೀಜಿಯಾಗಬೇಕು ಅಂದುಕೊಂಡಿಲ್ಲ. ದೊಡ್ಡ ಮಟ್ಟದ ಸ್ವಾಮೀಜಿಯಾಗಬೇಕು ಅಂದುಕೊಂಡಿದ್ದೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಾನು ಸ್ವಯಂ ಪ್ರೇರಣೆಯಿಂದ ಸನ್ಯಾಸಿಯಾಗಿದ್ದೇನೆ. ನನ್ನನ್ನು ಯಾರೂ ಕೂಡ ಸನ್ಯಾಸಿಯನ್ನಾಗಿ ಮಾಡಿಲ್ಲ. ಬಾಲೇಹೊಸೂರಿನ ಮಠಕ್ಕೆ ನೇಮಕ ಮಾಡಿದಾಗ ಮಠದ ಆರ್ಥಿಕ ಸ್ಥಿತಿ ಸರಿಯಿರಲಿಲ್ಲ. ಆ ಪರಿಸ್ಥಿತಿಯಲ್ಲಿ ನಾನು ಮಠದ ಅಧಿಕಾರ ವಹಿಸಿಕೊಂಡೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ತಿಂಗಳು ಗಂಜಿ ತಿಂದು ಬದುಕಿದ್ದೇನೆ. ಔಷದ ತರಲು ಕೂಡ ಹಣ ವಿರಲಿಲ್ಲ. ಇಂದು ಕರ್ನಾಟಕವೇ ಗಮನ ಹರಿಸುವಂತೆ ಮಠವನ್ನು ಬೆಳೆಸಿದ್ದೇನೆ ಎಂದು ಹೇಳಿದರು.
2006ರಲ್ಲಿ ಮೂಜಗು ಶ್ರೀಗಳು ದೂರವಾಣಿ ಕರೆ ಮಾಡಿ ಆರ್ಥಿಕ ಹಾಗೂ ಕಾನೂನು ಮುಗಟ್ಟಿನಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿದ್ದರು. ತಕ್ಷಣವೇ ಮುಂಬೈ ಕಾರ್ಯಕ್ರಮ ಮೊಟಕುಗೊಳಿಸಿ ಮೂರುಸಾವಿರ ಮಠಕ್ಕೆ ಬಂದೆ. ಮೂರು ಸಾವಿರ ಮಠದ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದೇನೆ. ಸಿರಗೇರಿ ಜಗದ್ಗುರು ಕರೆದುಕೊಂಡು ಹೋಗಿ ಮೂರು ಸಾವಿರ ಮಠದ ಇತ್ಯರ್ಥಕ್ಕೆ ಅಂಗಲಾಚಿದ್ದೇವೆ. ಮಠದ ನ್ಯಾಯ ನಿರ್ಣಯ ಸುಪ್ರೀಂಕೋರ್ಟ್ ವೆರೆಗೂ ಹೋಯಿತು. ರುದ್ರಮುನಿ ಸ್ವಾಮೀಜಿ ಉತ್ತರಾಧಿಕಾರ ವಿವಾದದಲ್ಲಿ ಒಂದು ಕೋಟಿ ರೂ.ವನ್ನು ನೀಡುವಂತಾಗಿತ್ತು. ಕೂಡಲೇ ಫೋನ್ ಮಾಡಿ ವಿವಿಧ ಪ್ರದೇಶದ ಭಕ್ತರಿಂದ ಹಣ ಪಡೆದೆ. ಅದರಲ್ಲಿ ಹಾವೇರಿ ಬ್ಯಾಡಗಿ 50 ಲಕ್ಷ ರೂ., ಲಕ್ಷ್ಮೇಶ್ವರದ ಭಕ್ತರು 15 ಲಕ್ಷ ರೂ., ಬೆಳಗಾವಿ 5 ಲಕ್ಷ ರೂ., ಹಾವನೂರ 5 ಲಕ್ಷ ರೂ., ಬಾಲೆಹೊಸೂರಿನ 5 ಲಕ್ಷ ರೂ., ಸಿಕ್ಕಿದೆ. ಆ ಹಣವನ್ನು ಪಡೆದು ವ್ಯವಹಾರವನ್ನು ನಿಭಾಯಿಸಿದ್ದೆ ಎಂದು ನೆನೆದರು.
ಅಲ್ಲದೇ ಕೋಲ್ಕತ್ತಾಗೆ ಹೋಗಲು ಬಾಲೆಹೊಸೂರಿನ ಸ್ವಂತ ಹಣವನ್ನು 25 ಲಕ್ಷ ನೀಡಿದ್ದೇವೆ. 2006ರಿಂದ ಮೂಜಗು ಶ್ರೀಗಳು, ಈ ಮಠಕ್ಕೆ ನೀವೇ ಕುಳಿತು ಕೊಳ್ಳಿ ಎಂದಿದ್ದರು. ಆ ಸಂದರ್ಭದಲ್ಲಿ ನಾನು ಒಪ್ಪಲಿಲ್ಲ. ಆದರೂ ಒಪ್ಪಿಸಲು ಮುಂದಾದರೂ ಎಂದರು.
ದಾಖಲೆಗಳ ಸಮೇತವಾಗಿ ಮಾತನಾಡಲು ವಕೀಲರನ್ನು ಕರೆದುಕೊಂಡು ಬಂದಿದ್ದೇನೆ. ನನ್ನನ್ನು ಮಠಾಧಿಪತಿ ಮಾಡಬಾರದು ಎಂದು ಕುತಂತ್ರ ಮಾಡಿದ್ದಾರೆ. ಅಲ್ಲದೇ ಸುಮಾರು ಬಾರಿ ನಾನು ಹುಬ್ಬಳ್ಳಿಗೆ ಬಂದಾಗ ಎಲ್ಲಿಯೂ ನನ್ನನ್ನು ಮಠಾಧಿಪತಿ ಮಾಡಲು ಹೇಳಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ನೆಹರು ಓಲೇಕಾರ, ಜಿ.ಎಸ್.ಗಡ್ಡದೇವರಮಠ, ಪ್ರಕಾಶ ಬೆಂಡಿಗೇರಿ, ಮಾಂತೇಶ ಗಿರಿಮಠ, ಸಿದ್ದಣ್ಣ ಶೆಟ್ಟರ್, ಡಿ.ಟಿ.ಪಾಟೀಲ, ಶಿವಾನಂದ ಮುತ್ತಣ್ಣವರ ಸೇರಿದಂತೆ ಇತರರು ಇದ್ದರು.
ಸ್ವಚ್ಛತಾ ಕಾರ್ಯ:
ದಿಂಗಾಲೇಶ್ವರ ಸ್ವಾಮೀಜಿಗಳು ನೇತೃತ್ವದಲ್ಲಿ ಇಂದು ಮೂರು ಸಾವಿರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸತ್ಯದರ್ಶನ ಸಭೆಗೆ ಆಗಮಿಸಿದ್ದ ಭಕ್ತರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸಭೆಯ ನಂತರದಲ್ಲಿ ದಿಂಗಾಲೇಶ್ವರ ಸ್ವಾಮೀಜಿಯವರು ಕಸ ಗೂಡಿಸುವ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು.
ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತಾಧಿಗಳಿಗೆ ಹಾಗೂ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಬೆಂಬಲಿಗರಿಗೆ ಮಠದ ಹೊರಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಪ್ರಸಾದ ವ್ಯವಸ್ಥೆ ನಂತರದಲ್ಲಿ ಬಿದ್ದಿರುವ ಕಸವನ್ನು ದಿಂಗಾಲೇಶ್ವರ ಸ್ವಾಮೀಜಿ ಅವರು ಗೂಡಿಸುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದರು.