ಬೆಂಗಳೂರು: ಹುಬ್ಬಳ್ಳಿಯ ಸಭೆಯಲ್ಲಿ ಸಿಎಂ ಯಡಿಯೂರಪ್ಪನವರು ಮಾತನಾಡಿದ್ದ ಆಡಿಯೋ ಕುರಿತು ಬಿಜೆಪಿ ಆಂತರಿಕ ತನಿಖೆ ಆರಂಭಿಸಿದೆ. ಈ ಸಂಬಂಧ ಯಡಿಯೂರಪ್ಪನವರು ಏಳು ಸದಸ್ಯರ ತಂಡವೊಂದನ್ನು ರಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯ ಸಭೆಯಲ್ಲಿ ಉತ್ತರ ಕರ್ನಾಟಕದ ಏಳು ಕ್ಷೇತ್ರಗಳ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಏಳು ಕ್ಷೇತ್ರಗಳ ಮುಖಂಡರ ಚಲನವಲನದ ಮೇಲೆ ಕಣ್ಣಿಡುವಂತೆ ಯಡಿಯೂರಪ್ಪ ಸೂಚಿಸಿದ್ದಾರೆ. ರಚನೆಯಾಗಿರುವ ಸಪ್ತ ತಂಡ ಗೋಕಾಕ್, ಕಾಗವಾಡ, ಅಥಣಿ, ಹಿರೇಕೆರೂರು, ವಿಜಯನಗರ, ಯಲ್ಲಾಪುರ ಮತ್ತು ರಾಣೆಬೆನ್ನೂರು ಕ್ಷೇತ್ರಗಳ ಮುಖಂಡರ ಮೇಲೆ ರಹಸ್ಯ ರನಿಖೆ ಆರಂಭಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ನಾಯಕರ ಪಟ್ಟಿಯನ್ನು ಈ ತಂಡ ಸಿದ್ಧಪಡಿಸುತ್ತಿದೆ. ಹೋಟೆಲ್ ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಸಪ್ತ ತಂಡ ಮುಂದಾಗಿದೆ. ಪಕ್ಷದ ಮುಖಂಡರು ಎಂದು ಹೇಳಿಕೊಂಡು ಬೇರೆಯವರು ಸಭೆಗೆ ಹಾಜರಾಗಿದ್ದರಾ? ಸಿಸಿಟಿವಿಯಲ್ಲಿ ಸಭೆಯೊಳಗೆ ಮೊಬೈಲ್ ತಂದಿದ್ಯಾರು ಎಂಬುವುದು ಬಹುತೇಕ ಗೊತ್ತಾಗಲಿದೆ ಎನ್ನಲಾಗುತ್ತಿದೆ.
ಸಪ್ತ ತಂಡ ಎಲ್ಲಾ ಆಯಾಮಗಳಲ್ಲಿ ಆಂತರಿಕ ತನಿಖೆ ಆರಂಭಿಸಿದೆ. ಪ್ರತಿ ಹಂತದ ತನಿಖೆಯ ಮಾಹಿತಿಯನ್ನು ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯ ಸಭೆಯಲ್ಲಿ ಉತ್ತರ ಕರ್ನಾಟಕದ ಏಳು ಕ್ಷೇತ್ರಗಳ ಮುಖಂಡರು ಮತ್ತು ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದರು. ಹಾಗಾಗಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ ತಮ್ಮನ್ನು ವಿಡಿಯೋ ಮಾಡಿದವರ ಗುಂಪಿನಲ್ಲಿ ಸೇರಿಸಿಕೊಂಡರೆ ಹೇಗೆ ಎಂಬ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಏಳು ಕ್ಷೇತ್ರಗಳ ನಾಯಕರು ವಿಡಿಯೋ ಬಿಡುಗಡೆ ಮಾಡಿದವರು ನಾವಲ್ಲ ಎಂದು ಸಿಎಂ ಅವರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಒಂದು ವೇಳೆ ವಿಡಿಯೋ ಮಾಡಿದವರ ಗುಂಪಿನಲ್ಲಿ ನಮ್ಮ ಹೆಸರು ಸೇರಿದರೆ ಪಕ್ಷದಿಂದ ಉಚ್ಛಾಟಿಸಬಹುದು. ಸ್ಥಳೀಯಮಟ್ಟದಲ್ಲಿಯ ಗೌರವಕ್ಕೆ ಧಕ್ಕೆ ಆಗಬಹುದು. ಭವಿಷ್ಯದಲ್ಲಿ ಪಕ್ಷ ಯಾವುದೇ ಜವಾಬ್ದಾರಿ ಹುದ್ದೆ ನೀಡದಿದ್ದರೆ ಹೇಗೆ ಎಂಬ ಆತಂಕ ಸಭೆಯಲ್ಲಿ ಭಾಗಿಯಾಗಿದ್ದ ನಾಯಕರಲ್ಲಿ ಮನೆ ಮಾಡಿದೆ. ಹೀಗಾಗಿ ಎಲ್ಲರೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಯಡಿಯೂರಪ್ಪರನ್ನು ಸಂಪರ್ಕಿಸಿ ಸ್ಪಷ್ಟನೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.