ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಹಾ (Neha) ತಂದೆ ನೀಡಿದ ದೂರಿನ ಮೇರೆಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು (Hubballi Vidyanagar Police) ಎಫ್ಐಆರ್ ದಾಖಲಿಸಿದ್ದಾರೆ. ಹಂತಕ ಫಯಾಜ್ ಮದುವೆ ಮಾಡಿಕೊಡುವಂತೆ ಪದೇ ಪದೇ ಕುಟುಂಬಸ್ಥರಿಗೆ ಕರೆ ಮಾಡಿ ಪೀಡಿಸುತ್ತಿದ್ದ ಎಂದು ಎಫ್ಐಆರ್ನಲ್ಲಿ (FIR) ಉಲ್ಲೇಖಿಸಿದ್ದಾರೆ.
ಎಫ್ಐಆರ್ನಲ್ಲಿ ಏನಿದೆ?
ನೇಹಾ ತಂದೆ ಹೇಳಿರುವಂತೆ, ಫಯಾಜ್ ನಮ್ಮ ಮಗಳ ಸಹಪಾಠಿ. ನನ್ನ ಮಗಳನ್ನು ಪ್ರೀತಿ ಮಾಡುವಂತೆ ಬಲವಂತ ಮಾಡುತ್ತಿದ್ದ. ಅಲ್ಲದೇ ಮದುವೆ ಮಾಡಿಕೊಡುವಂತೆ ನಮ್ಮ ಕುಟುಂಬಸ್ಥರಿಗೂ ಪದೇ ಪದೇ ದೂರವಾಣಿ ಕರೆ ಮಾಡಿ ಕೇಳುತ್ತಿದ್ದ. ಆದ್ರೆ ನಮ್ಮ ಮನೆಯವರು ನಮ್ಮ ಮಗಳು ನಿನ್ನನ್ನು ಇಷ್ಟಪಡುತ್ತಿಲ್ಲ. ಅವಳು ಇನ್ನು ಹೆಚ್ಚಿನ ವ್ಯಾಸಂಗ ಮಾಡಬೇಕು ಅಂದುಕೊಂಡಿದ್ದಾಳೆ ಅಂತ ಹೇಳುತ್ತಲೇ ಇದ್ದರು. ಇದರಿಂದ ಹತಾಷೆಗೊಂಡ ಫಯಾಜ್ ಇದೇ ತಿಂಗಳ 18ರಂದು ಹತ್ಯೆ ಮಾಡಿದ್ದಾನೆ ಎಂದು ಹೇಳಿಕೆ ದಾಖಲಿಸಿದ್ದಾರೆ. ಇದನ್ನೂ ಓದಿ: ನನ್ನ ಮಗ ತಪ್ಪು ಮಾಡಿದ್ದಾನೆ.. ಅವನಿಗೆ ಶಿಕ್ಷೆ ಆಗಲೇಬೇಕು: ಕೊಲೆಗಾರ ಫಯಾಜ್ ತಾಯಿ ಕಣ್ಣೀರು
ಏನಿದು ಪ್ರಕರಣ?
ಯುವಕನೊಬ್ಬ ವಿದ್ಯಾರ್ಥಿನಿಯನ್ನು ಬಿವಿಬಿ ಕಾಲೇಜ್ ಕ್ಯಾಂಪಸ್ನಲ್ಲೇ ಕೊಲೆ ಮಾಡಿದ್ದಾನೆ. ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಕೊಲೆಯಾದ ವಿದ್ಯಾರ್ಥಿನಿ. ಅದೇ ಕಾಲೇಜಿನ ವಿದ್ಯಾರ್ಥಿ ಫಯಾಜ್ 9 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಪ್ರಥಮ ವರ್ಷದ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ನೇಹಾಗೆ ಕ್ಯಾಂಪಸ್ನಲ್ಲೇ 9 ಬಾರಿ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ನೇಹಾಳನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಆಕೆ ಪ್ರಾಣ ಬಿಟ್ಟಿದ್ದಾಳೆ. ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾಗಿದ್ದ ಫಯಾಜ್ ಕೆಲ ದಿನಗಳಿಂದ ನೇಹಾ ಬೆನ್ನು ಬಿದ್ದಿದ್ದ ಎನ್ನಲಾಗಿದೆ. ಕೊಲೆ ಮಾಡಿ ಪರಾರಿಯಾಗುತ್ತಿದ್ದಾಗ ಫಯಾಜ್ನನ್ನು ಅಲ್ಲಿದ್ದ ವ್ಯಕ್ತಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾಜ್ಯದ ವಿವಿಧೆಡೆ ಪ್ರತಿಭಟನೆ:
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಖಂಡಿಸಿ ರಾಯಚೂರು, ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆ ಭುಗಿಲೆದ್ದಿದೆ. ಅಲ್ಲದೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬೆಂಗಳೂರಿನಲ್ಲಿರುವ ಗೃಹಸಚಿವರ ನಿವಾಸಕ್ಕೆ ಮುತ್ತಿಗೆ ಹಾಲು ಯತ್ನಿಸಿದೆ. ಈ ವೇಳೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಇಂಥ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ: ನೇಹಾ ಕೊಲೆ ಬಗ್ಗೆ ನಟಿ ರಚಿತಾ ರಾಮ್ ಪ್ರತಿಕ್ರಿಯೆ