ಹುಬ್ಬಳ್ಳಿ: ವ್ಯಕ್ತಿಯೊಬ್ಬ ವಿಷ ಸೇವಿಸಿದ್ದೇನೆ ಎಂದು ಹೇಳಿ ಠಾಣೆಗೆ ಬಂದು ಪೊಲೀಸರನ್ನು ಆತಂತಕಕ್ಕೆ ದೂಡಿದ ಘಟನೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಲೋಹಿಯಾ ನಗರದ ನಿವಾಸಿ ಪರಶುರಾಮ ಬದ್ದಿ ಪೊಲೀಸ್ ಠಾಣೆ ಎದುರು ಹೈ ಡ್ರಾಮಾ ಸೃಷ್ಟಿಸಿದ ವ್ಯಕ್ತಿ. ವಿಷದ ಬಾಟಲ್ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದ ಪರಶುರಾಮ ನ್ಯಾಯ ಕೊಡಿಸಿ, ನನಗೆ ವಂಚನೆ ಎಸಗಿದ್ದಾರೆ ಎಂದು ಹೇಳಿದ್ದ. ವಿಷದ ಬಾಟಲ್ ನೋಡಿದ ಪೊಲೀಸರು ಆತಂಕಕ್ಕೆ ಒಳಗಾಗಿದ್ದಾರೆ.
ಸಂತೋಷ ಕಟಾವೆ ನನ್ನಿಂದ 2 ಲಕ್ಷ ರೂ. ಪಡೆದಿದ್ದಾರೆ. ಆದರೆ ಈಗ ಹಣವನ್ನು ವಾಪಸ್ ಕೊಡುತ್ತಿಲ್ಲ. ಹೀಗಾಗಿ ಮನನೊಂದು ವಿಷ ಕುಡಿದಿದ್ದೇನೆ ಎಂದು ಪರಶುರಾಮ ಬದ್ದಿ ಪೊಲೀಸರಿಗೆ ದೂರು ನೀಡಿದ್ದಾನೆ.
ಪರಶುರಾಮ ಬದ್ದಿ ಹೈಡ್ರಾಮದಿಂದ ಬೇಸತ್ತ ಪೊಲೀಸರು ಆತನನ್ನು ಅಂಬುಲೆನ್ಸ್ ಮೂಲಕ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ಪರಶುರಾಮ ಕೆಮ್ಮಿನ ಔಷಧಿ ಕುಡಿದಿರುವುದು ಖಚಿತವಾಗಿದೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.