ಹುಬ್ಬಳ್ಳಿ: ಮಹದಾಯಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ಅಲ್ಲದೇ ಉತ್ತರ ಕರ್ನಾಟಕದ ಜನತೆಗೆ ಮಾತ್ರವಲ್ಲದೆ ರಾಜ್ಯದ ಜನತೆಗೆ ಇದು ಖುಷಿಯ ಕ್ಷಣವಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಮಹದಾಯಿ ಯೋಜನೆಯ ಕುರಿತು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಕುರಿತು ಮಾಧ್ಯಮದ ಮೂಲಕ ಮಾತನಾಡಿದ ಅವರು, ಸುಮಾರು ದಿನಗಳ ಹೋರಾಟಕ್ಕೆ ಬಂದಿರುವ ಜಯವಾಗಿದೆ. ಎರಡು ದಿನದ ಹಿಂದೆ ರಾಜ್ಯ ಹಾಗೂ ಕೇಂದ್ರ ಸಚಿವರು ಕೂಡಿಕೊಂಡು ಕೇಂದ್ರ ನೀರಾವರಿ ಸಚಿವ ಶೇಕಾವತ್ ಅವರನ್ನು ಭೇಟಿಯಾಗಿ ಮಾತನಾಡಿದ್ದೆವು. ಅವರು ಕೂಡ ಭರವಸೆಯನ್ನು ನೀಡಿದ್ದರು. ಆ ಭರವಸೆಯಂತೆ ಅವರು ಒಂದೇ ದಿನದಲ್ಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ ಎಂದರು. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ನೀರಾವರಿ ಸಚಿವ ಶೇಕಾವತ ಅವರಿಗೆ ಸಚಿವ ಶೆಟ್ಟರ್ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಬಿಎಸ್ವೈ ಬರ್ತ್ ಡೇ ಗಿಫ್ಟ್ – ಮಹದಾಯಿ ನೋಟಿಫಿಕೇಷನ್ ಹೊರಡಿಸಿದ ಕೇಂದ್ರ
ಹೋರಾಟಗಾರರ ವಿಜಯೋತ್ಸವ:
ನಾಲ್ಕು ದಶಕದ ಮಹದಾಯಿ ಹೋರಾಟಕ್ಕೆ ಜಯ ಸಿಕ್ಕಿದ್ದು, ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರು ಹಾಗೂ ರೈತ ಮುಖಂಡರು ನಗರದ ಚೆನ್ನಮ್ಮ ವೃತ್ತದ ಬಳಿ ವಿಜಯೋತ್ಸವ ಆಚರಣೆ ಮಾಡಿದರು. ಕರ್ನಾಟಕ ರಾಜ್ಯಕ್ಕೆ ಮಹದಾಯಿ 13.5 ಟಿಎಂಸಿ ನೀರು ಬಂದಿರುವುದು ಸ್ವಾಗತಾರ್ಹವಾಗಿದೆ. ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ರೈತ ಮುಖಂಡರು ಘೋಷಣೆ ಕೂಗಿದರು.
ಕಳೆದ ನಾಲ್ಕು ದಶಕದ ಹೋರಾಟಕ್ಕೆ ಬಂದಿರುವ ಈ ನಿರ್ಧಾರ ರಾಜ್ಯಕ್ಕೆ ಸಿಕ್ಕಿರುವ ಜಯವಾಗಿದೆ. ಇದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದು ಜಯ ಘೋಷಣೆ ಕೂಗಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ರಾಜಣ್ಣ ಕೊರವಿ,ಸಿದ್ದು ತೇಜಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ರೈತ ಮುಖಂಡರು ಪಾಲ್ಗೊಂಡಿದ್ದರು.