ಶಿವಮೊಗ್ಗ: ಜಿಲ್ಲೆಯ ತೇವರಚಟ್ನಳ್ಳಿಯಲ್ಲಿ ರಾಷ್ಟ್ರಕೂಟರ ಹಾಗೂ ಹೊಯ್ಸಳರ ಕಾಲದ ಶಾಸನಗಳು ಪತ್ತೆಯಾಗಿವೆ.
ರಾಷ್ಟ್ರಕೂಟರ ಕಾಲದ ಸಿಡಿತಲೆ, (ಆತ್ಮಬಲಿದಾನ) ವೀರಗಲ್ಲು, ಗ್ರಾನೈಟ್ ಕಲ್ಲಿನಿಂದ ಕೂಡಿವೆ. 1 ಮೀ. 60 ಸೆ.ಮೀ. ಉದ್ದ, 86 ಸೆ.ಮೀ. ಅಗಲದ ಹಳೆಗನ್ನಡ ಶಾಸನ ಇದಾಗಿದೆ. ಸಿಡಿತಲೆ ಕೊಡಬೇಕಾದ ವ್ಯಕ್ತಿಯು ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳುತ್ತಾನೆ. ಅವನ ಜುಟ್ಟಿಗೆ ನೆಲದಲ್ಲಿ ಹೂಳಿದ ಗಳುವೊಂದನ್ನು ಬಾಗಿಸಿ ಕಟ್ಟುತ್ತಾರೆ. ಅವನ ತಲೆಯನ್ನು ಮತ್ತೊಬ್ಬನು ಕತ್ತಿಯಿಂದ ಹಾರಿಸಿದಾಗ ತಲೆ ಮೇಲಕ್ಕೆ ಸಿಡಿಯುತ್ತದೆ. ಇದು ಸಿಡಿತಲೆ ಕೊಡುವ ವಿಧಾನವಾಗಿದೆ.
ರಾಜ್ಯದಲ್ಲಿ ವಿವಿಧ ಕಡೆಗಳಲ್ಲಿ ಇಂತಹ ಶಾಸನ ಆಧಾರಿತ ವೀರಗಲ್ಲುಗಳು ಪತ್ತೆಯಾಗಿವೆ. ಅವುಗಳಲ್ಲಿ ಮುಖ್ಯವಾಗಿ ಒಡೆಯನಿಗೆ ಶುಭಕೋರಿ ಪ್ರಾಣಾರ್ಪಣೆ ಮಾಡಿದ ಸಿಡಿತಲೆ, ವೀರಗಲ್ಲುಗಳು ಶಾಸನ ಸಹಿತ ಹಾಗೂ ರಹಿತ ಕಂಡು ಬಂದಿವೆ. ಕ್ರಿ.ಶ. 12-13ನೇ ಶತಮಾನದ ಹೊಯ್ಸಳರ ಕಾಲದ ಶಾಸನಭರಿತ ಮೂರು ವೀರಗಲ್ಲುಗಳು ದೊರೆತಿವೆ. ಶಾಸನ ಪತ್ತೆಗೆ ಸಹಕರಿಸಿದ ಮೋಹನ್ ಕುಮಾರ್ ಅವರಿಗೆ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ್ ಅಭಿನಂದಿಸಿದ್ದಾರೆ.