ಬೆಂಗಳೂರು: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಂತರ ಕೊರೊನಾ, ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ ಶಾಸಕರು, ಕಾರ್ಯಕರ್ತರು, ಪೊಲೀಸ್ ಅಧಿಕಾರಿಗಳಿಗೆ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ನಡೆಯನ್ನು ಪ್ರಶ್ನೆ ಮಾಡಿ ಟ್ವೀಟ್ ಮಾಡಿದೆ.
ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ? ಅಂದ ಹಾಗೆ ನಿಮ್ಮ ಜೊತೆಯಲ್ಲಿ ಕೋವಿಡ್ ಜಾತ್ರೆಯಲ್ಲಿ ಹೆಜ್ಜೆ ಹಾಕಿದ ಹಲವು ನಾಯಕರಿಗೆ ಈಗ ಕೋವಿಡ್ ದೃಢಪಟ್ಟಿದೆ. ಅಂದರೆ ಕೋವಿಡ್ ನಿಮ್ಮ ಅಕ್ಕಪಕ್ಕದಲ್ಲಿತ್ತು. ಅದಕ್ಕಾಗಿ ನಿಮ್ಮ ಬಗ್ಗೆ ನಮಗೆ ಕಾಳಜಿ. ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಅತ್ಯಂತ ಅಗತ್ಯವಾಗಿ ಕೋವಿಡ್ ಪರೀಕ್ಷಾ ವರದಿ ಬಿಡುಗಡೆಗೊಳಿಸಬೇಕು. ಪಾದಯಾತ್ರೆ ನಡೆಸಿದ ಭಾಗದಲ್ಲಿ ಈಗ ಕೋವಿಡ್ ಸೋಂಕು ಹೆಚ್ಚುತ್ತಿದೆ. ಈ ಬಾರಿ ಕೋವಿಡ್ ಸೂಪರ್ ಸ್ಪ್ರೆಡರ್ ರೀತಿ ಕೆಲಸ ಮಾಡಿದ್ದೀರಿ.
ಸಾರ್ವಜನಿಕ ಹಿತದೃಷ್ಟಿಯಿಂದ ನಿಮ್ಮ ಕೋವಿಡ್ ವರದಿ ಬಹಿರಂಗಗೊಳಿಸುವಿರಾ? ಆರೋಗ್ಯ ಸರಿ ಇಲ್ಲದವ್ರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಉಡಾಫೆ ಉತ್ತರ ಕೊಟ್ಟರೆ ಹೇಗೆ ಡಿಕೆಶಿ ಅವರೇ? ಹಳೇ ಮೈಸೂರು ಭಾಗದಲ್ಲಿ ಕೋವಿಡ್ ಹಂಚಿಕೆಯ ಅನಧಿಕೃತ ಫ್ರಾಂಚೈಸಿದಾರರು ನೀವು. ಸಾಂಕ್ರಾಮಿಕ ಕಾಯಿದೆ ಉಲ್ಲಂಘನೆಯ ನೇತಾರರಲ್ಲವೇ ನೀವು? ರಕ್ಷಣೆಗೆ ನಿಯೋಜನೆಯಾಗಿದ್ದ ಪೊಲೀಸರು ಕೋವಿಡ್ ಸೋಂಕಿತರಾಗುತ್ತಿದ್ದಾರೆ. ಕೋವಿಡ್ ಸೂಪರ್ ಸ್ಪ್ರೆಡರ್ ಡಿಕೆಶಿ ಅವರೇ ಇದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿ ಬಿಜೆಪಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?
ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಖರ್ಗೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೀಗೆ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಾಕಷ್ಟು ಪೊಲೀಸ್ ಅಧಿಕಾರಿಗಳು ಕೂಡಾ ಸೋಂಕಿಗೆ ತುತ್ತಾಗಿದ್ದಾರೆ. ಇದನ್ನೂ ಓದಿ: ಒಬಿಸಿ ನಾಯಕರಿಂದ ಬಿಜೆಪಿಗೆ ರಾಜೀನಾಮೆ – ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ